ಸಿಗಂದೂರು : ಶೀಘ್ರದಲ್ಲೇ ಲಾಂಚ್ ನಲ್ಲಿ ಹೋಟೆಲ್, ಬೋಟಿಂಗ್ ವ್ಯವಸ್ಥೆ
ಸಾಗರ : ತಾಲೂಕಿನ ಸಿಗಂದೂರಿಗೆ ದಶಕಗಳ ಕಾಲ ಶರಾವತಿ ಹಿನ್ನಿರಿನಲ್ಲಿ ಸಂಪರ್ಕ ಕಲ್ಪಿಸಿದ್ದ ಲಾಂಚ್ ಸೇತುವೆ ನಿರ್ಮಾಣದ ನಂತರ ತನ್ನ ಸೇವೆಗೆ ಅಂತಿಮ ವಿದಾಯ ಹೇಳಿತು. ಆ ಭಾಗದ ಸಾವಿರಾರು ಜನರ, ಭಕ್ತರ ಬದುಕಿನ ಭಾಗವಾಗಿದ್ದ ಲಾಂಚ್ ಈಗ ಹಿನ್ನಿರಿನಲ್ಲಿ ನಿಂತು ಕೇವಲ ನೆನಪಾಗಿ ಉಳಿದಿದೆ.
ದಶಕಗಳ ಕಾಲ ಭಕ್ತರ ಸಾವಿರಾರು ಜನರ ಬದುಕಿಗೆ ಆಸರೆಯಾಗಿದ್ದ ಲಾಂಚ್ , ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಅನುಕೂಲವಾಗಿದ್ದ ಲಾಂಚ್ ಇತಿಹಾಸದ ಪುಟ ಸೇರದೆ ಜನರ ಸೇವೆಗೆ ಇನ್ನಷ್ಟು ಬಳಕೆಗೆ ಬರಬೇಕು ಎನ್ನುವ ಉದ್ದೇಶದಿಂದ ವಿಭಿನ್ನ ಉಪಯೋಗಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಮುಂದಾಗಿದ್ದಾರೆ.
ಶರಾವತಿ ಹಿನ್ನಿರಿನಲ್ಲಿ ಸೇವೆಯನ್ನು ನಿಲ್ಲಿಸಿದ ಲಾಂಚ್ ನಲ್ಲಿ ಹೋಟೆಲ್ ಅನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶಾಸಕರು ಹೇಳಿದರು. ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದ್ದು, ದೀಪಾವಳಿ ಹಬ್ಬದೊಳಗೆ ಆರಂಭಿಸಲಾಗುವುದೆಂದು ಹೇಳಿದರು. ಅಲ್ಲದೆ ಶರಾವತಿ ನೀರಿನಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಸಹ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದೆಂದು ಹೇಳಿದರು.
ಗ್ರಾಮ ಪಂಚಾಯಿತಿ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದರೆ ನ್ಯಾಯಾಲಯಕ್ಕೆ ಹೋಗಲಿ
ಗ್ರಾಮ ಪಂಚಾಯಿತಿ ಮೀಸಲಾತಿಯಲ್ಲಿ ಕಾಂಗ್ರೆಸ್ ತನ್ನ ಅನುಕೂಲಕ್ಕೆ ಮಾಡಿಕೊಂಡಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಅನ್ಯಾಯವಾಗಿದ್ರೆ ನ್ಯಾಯಲಯಕ್ಕೆ ಹೋಗಿ ನ್ಯಾಯ ಕೇಳಲಿ ಎಂದು ತಿರುಗೇಟು ನೀಡಿದರು. ಬಿಜೆಪಿಯವರು ಸಹ ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಅನುಕೂಲಕ್ಕೆ ಮೀಸಲಾತಿ ಮಾಡಿಕೊಂಡಿದ್ದರು. ಆದರೂ ಸಹ ನಾವು ಉತ್ತಮ ಫಲಿತಾಂಶವನ್ನು ಪಡೆದಿದ್ದೆವು ಎಂದು ಹೇಳಿದರು.
ಹಾಲಪ್ಪನಿಗೆ ಕೆಲಸವಿಲ್ಲದೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಆಂತರಿಕ ಗೊಂದಲದಿಂದಾಗಿ ಮನೆಯೊಂದು ಮೂರು ಬಾಗಿಲು ಆಗಿದೆ. ನಾನು ಬಿಜೆಪಿಯ ಕದತಟ್ಟಿಲ್ಲ ಆರ್ ಎಸ್ ಎಸ್ ನಲ್ಲಿ ಉತ್ತಮ ಸ್ನೇಹಿತರಿದ್ದಾರೆ. ನಾನು ಮಂತ್ರಿಯಾಗಬೇಕು ಎಂದು ಬಯಸಿದ್ದರು. ಹಿಂದೆ ಹಾಲಪ್ಪನವರೇ ಸಿದ್ದರಾಮಯ್ಯನವರ ಕಾಲು ಹಿಡಿದಿದ್ದರು. ಆಗ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಿದ್ದರೂ ಎಂದು ಹರತಾಳು ಹಾಲಪ್ಪ ಅವರ ಮಾತಿಗೆ ತಿರುಗೇಟು ನೀಡಿದರು.
2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ
2028ರಲ್ಲೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಛಲ ನಮ್ಮ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಇದೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಅವರನ್ನು ಹಾಗೂ ಕಾಂಗ್ರೆಸ್ಸನ್ನು ಬಿಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಗೌತಮಪುರ ಗ್ರಾಮಕ್ಕೆ ಬೇಟಿ : ಕುಟುಂಬಕ್ಕೆ ಸಾಂತ್ವನ
ಇತ್ತೀಚೆಗೆ ಶಿಕಾರಿಪುರ ತಾಲೂಕಿನ ಕುಮದ್ವತಿ ವರದಾ ನದಿ ಸೇತುವೆ ಮೇಲೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಮಿಲನ್ ಅವರ ಮನೆಗೆ ಭೇಟಿ ನೀಡಿ ತಂದೆ ಮಂಜುನಾಥ್ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗೌತಮಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ದಾಸನ್, ಪ್ರಮುಖರಾದ ಉಮೇಶ್ ಎನ್, ಗಿರೀಶ್ ಕೋವಿ, ರಹಮತ್ ವುಲ್ಲಾ, ಅಶ್ವಿನ್, ಷಣ್ಮುಖಪ್ಪ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ





