ಸಾಗರ : ತಾಲೂಕಿನಲ್ಲಿ ಶಾಸಕರಿಂದ ರೈತರಿಗೆ ರಕ್ಷಣೆ ನೀಡುವ ಕೆಲಸವಾಗುತ್ತಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ವಾಗ್ದಾಳಿ ನಡೆಸಿದ್ದಾರೆ.
ಅವರು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜವಾಬ್ದಾರಿ ಇರುವಂತಹ ಶಾಸಕರು ಬಡ ರೈತನ ಜಾಗಕ್ಕೆ ಹೋಗಿ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿತ್ತು ಎಂದು ಅಡ್ಡೇರಿ ಗ್ರಾಮದಲ್ಲಿ ಕೇವಲ 15 ಗುಂಟೆ ಜಮೀನು ಒತ್ತುವರಿ ತೆರವು ಕಾರ್ಯವನ್ನು ಉಲ್ಲೇಖಿಸಿ ಮಾತನಾಡಿದರು.
ಇದಲ್ಲದೆ ರೈತನಿಗೆ ಆದ ಅನ್ಯಾಯದ ಬಗ್ಗೆ ಉತ್ತರ ನೀಡಬೇಕಾಗಿತ್ತು. ಆದರೆ ಶಾಸಕರು ಉತ್ತರ ನೀಡದೆ ಭ್ರಷ್ಟಾಚಾರದಲ್ಲಿ ಮುಳುಗಿದ ಅವರ ಹಿಂಬಾಲಕರ ಮೂಲಕ ಉತ್ತರ ನೀಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಆಡಳಿತ ಪಕ್ಷದವರು ಅಡ್ಡೇರಿ ಗ್ರಾಮದಲ್ಲಿ ನಡೆದ ಘಟನೆಗಳ ಬಗ್ಗೆ ರೈತರಿಗೆ ನ್ಯಾಯ ನೀಡಿದ್ದೇವೆ ಎಂದು ಹೇಳುವ ಅವರು , ಅರಣ್ಯ ಅಧಿಕಾರಿಗಳು ಮತ್ತೆ ಯಾಕೆ ರೈತರಿಗೆ ತೊಂದರೆ ನೀಡಿದರು.
ಆಡಳಿತ ಪಕ್ಷದವರು ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಬಡ ರೈತನಿಗೆ ರಕ್ಷಣೆ ನೀಡುವ ಕೆಲಸವನ್ನು ಮಾಡಿದರೆ ನಾವು ಪ್ರತಿಭಟಿಸುವ ಕೆಲಸ ಮಾಡುತ್ತಿರಲಿಲ್ಲ. ನಾವು ರಾಜಕಾರಣ ಮಾಡುವುದಾದರೆ ಅರಣ್ಯ ಭೂಮಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಎಂದು ಮಾಧ್ಯಮದಲ್ಲಿ ಸುದ್ದಿಯಾದ ಬಗ್ಗೆ ರಾಜಕಾರಣ ಮಾಡಬಹುದಾಗಿತ್ತು ಎಂದು ಹೆಸರು ಹೇಳದೆ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಯಾವುದೇ ಕಾರಣಕ್ಕೂ ರೈತರ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ರೈತರ ಪರವಾಗಿ ಹೋರಾಟ ಮಾಡಿ ನಿಮ್ಮ ಬೆದರಿಕೆಗಳಿಗೆ ಹೇದರದೆ ರಕ್ಷಣೆ ನೀಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ಕಾಗೋಡು ತಿಮ್ಮಪ್ಪ ಯಡಿಯೂರಪ್ಪ ಬಂಗಾರಪ್ಪನಂತಹ ರೈತ ನಾಯಕರು ರೈತರ ಪರವಾಗಿ ಹೋರಾಟ ನಡೆಸಿದ ಕ್ಷೇತ್ರದಲ್ಲಿ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಚುನಾವಣೆ ಬಂದ ಸಂದರ್ಭದಲ್ಲಿ ಮನೆಬಾಗಿಲಿಗೆ ಹೋಗುವ ಮುಖಂಡರು ರೈತರಿಗೆ ಅನ್ಯಾಯವಾದ ಸಂದರ್ಭದಲ್ಲಿ ಭೇಟಿ ನೀಡದಿರುವುದು ವಿಪರ್ಯಾಸ ಎಂದು ಹೇಳಿದರು.
ಇನ್ನು ಅಭಿವೃದ್ಧಿ ವಿಷಯಕ್ಕೆ ಬರುವುದಾದರೆ ಶಾಸಕರು ಭೂಮಿ ಪೂಜೆಗೆ ಬಂದ ಸಂದರ್ಭದಲ್ಲಿ ಹತ್ತು ಜನರು ಸೇರದೆ ಭೂಮಿ ಪೂಜೆ ಮಾಡದೆ ವಾಪಸ್ ಹೋದ ಘಟನೆಗಳು ನಡೆಯುತ್ತಿವೆ. ತಪ್ಪು ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪಗೌಡ, ದಲಿತ ಸಮಿತಿಯ ಮುಖಂಡ ರೇವಪ್ಪ, ಬಿಜೆಪಿ ಮುಖಂಡರಾದ ರೇವಣಸಿದ್ದಯ್ಯ, ರವಿ ಗೌಡ ಉಪಸ್ಥಿತರಿದ್ದರು.





