ಸಾಗರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳನ್ನು ತಪ್ಪಿಸುವ ದೃಷ್ಟಿಯಿಂದ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಅವರು ವಿನೋತನ ಮಾರ್ಗವನ್ನು ಅನುಸರಿಸಿದ್ದಾರೆ.
ಎಚ್ಚೆತ್ತುಕೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಮಾರ್ಗದಲ್ಲಿ ಆನಂದಪುರ ಸಮೀಪದ (ರಾಷ್ಟ್ರೀಯ ಹೆದ್ದಾರಿ 69 ) ಐಗಿನಬೈಲು ಕ್ರಾಸ್ ಹಾಗೂ ಹೊಸೂರು ಅರಣ್ಯ ನರ್ಸರಿ ಬಳಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಇದಕ್ಕೆ ಪ್ರಮುಖ ಕಾರಣ ರಸ್ತೆ ಸಂಪೂರ್ಣ ಹಾಳಾಗಿದ್ದು, ಚಾಲಕ ಒಂದು ಕ್ಷಣ ಮೈ ಮರೆತರೂ ಸಹ ಅಪಘಾತ ಸಂಭವಿಸುವುದು ಖಚಿತವಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರು, ಸಾರ್ವಜನಿಕರು, ವಾಹನ ಚಾಲಕರು ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಬಹಳ ತಿರುವುಗಳಿಂದ ಕೂಡಿದ್ದು, ಅಪಘಾತಕ್ಕೆ ಇದು ಸಹ ಕಾರಣವಾಗಿದೆ.
ಪಿಎಸ್ಐ ಪ್ರವೀಣ್ ಅವರಿಂದ ವಿನೂತನ ಮಾರ್ಗ
ಐಗಿನಬೈಲು ಕ್ರಾಸ್ ಬಳಿ ನಿರಂತರವಾಗಿ ಅಪಘಾತ ಸಂಭವಿಸುವುದನ್ನು ಮನಗಂಡ ಆನಂದಪುರ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ಅವರು ವಿನೂತನ ಮಾರ್ಗವನ್ನು ಕಂಡುಕೊಂಡಿದ್ದಾರೆ. ರಸ್ತೆ ಅಪಘಾತ ಹಾಗೂ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ರಾತ್ರಿ ವೇಳೆಯಲ್ಲಿ ಸ್ಪಷ್ಟವಾಗಿ ಗೋಚರಿಸುವ ಹಾಗೆ ಬ್ಯಾರೆಲ್ ಗಳಿಗೆ ರೇಡಿಯಂ ಸ್ಟಿಕರ್ ಗಳನ್ನು ಐಗಿನಬೈಲು ಕ್ರಾಸ್ ಬಳಿ ಅಳವಡಿಕೆ ಮಾಡಿದ್ದಾರೆ.





