ಬೈಕ್ ಟಿಪ್ಪರ್ ನಡುವೆ ಭೀಕರ ಅಪಘಾತ : ಯುವತಿ ಸ್ಥಳದಲ್ಲೇ ಸಾವು.
ಸಾಗರ : ತಾಲೂಕಿನ ನೆಲ್ಲಿಬೀಡು ವೃತ್ತದಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತುಮರಿಯಿಂದ ನಿಟ್ಟೂರು ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 369 ನೆಲ್ಲಿಬೀಡು ವೃತ್ತದಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮಳೂರು ಗ್ರಾಮದ ನಿವಾಸಿ ಅರ್ಚನಾ (28) ಸ್ಥಳದಲ್ಲಿ ಸಾವನಪ್ಪಿದ್ದು, ಇವರ ತಂದೆ ನೀಲಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅರ್ಚನಾ ಅವರು ಕುಂದಾಪುರದ ಖಾಸಗಿ ಹಾಸ್ಟೆಲ್ ಒಂದರಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಅವರು, ಇಂದು ಮರಳಿ ಕರ್ತವ್ಯಕ್ಕೆ ಹಾಜರಾಗಲು ತಂದೆ ನೀಲಕುಮಾರ್ ಅವರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಡಗೋಡಿ ಕಡೆಯಿಂದ ಬಂದ ಟಿಪ್ಪರ್ ಬೈಕ್ ಗೆ ಬಲವಾಗಿ ಬಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮವಾಗಿ ಅರ್ಚನಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ತಂದೆ ನೀಲಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.





