ಸಾಗರ : ದೇಶಾದ್ಯಂತ ಏಪ್ರಿಲ್ 14ರಂದು ವಿವಿಧ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಹಂತದ ಜನಪ್ರತಿನಿಧಿಗಳು ಸಹ ಭಾಗಿಯಾಗಿದ್ದಾರೆ. ಆದರೆ ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅಂಬೇಡ್ಕರ್ ಜಯಂತಿಯನ್ನು ಮರೆತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲೂಕಿನ ಶಾಸಕರು ಸಚಿವ ಸ್ಥಾನ ಪಡೆಯುವ ಉದ್ದೇಶದಿಂದ ದೆಹಲಿಯಲ್ಲಿ ಇದ್ದು ಶಾಸಕರಾಗಿ ಅಂಬೇಡ್ಕರ್ ಜಯಂತಿಯನ್ನು ಮರೆತಿರುವುದು ಸರಿಯಲ್ಲ. ಸಚಿವ ಸ್ಥಾನ ಪಡೆಯವುದು ಸಂತೋಷದ ವಿಷಯ ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಅಂಬೇಡ್ಕರ್ ಜಯಂತಿಯನ್ನು ಮರೆಯಬಾರದು ಎಂದು ಹೇಳಿದರು.
ವರ್ಗಾವಣೆ, ಸಚಿವ ಸ್ಥಾನ, ಆಸ್ತಿ ಖರೀದಿಯಲ್ಲಿ ಮುಳುಗಿರುವ ಶಾಸಕರು ಇಂತಹ ಜಯಂತಿಗಳು ನೆನಪಾಗುವುದಿಲ್ಲ. ತಾಲೂಕು ಆಡಳಿತ ಜೊತೆಗೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ರೂಪರೇಷೆ ಮಾಡಬೇಕಾದವರೂ, ಸಚಿವ ಸ್ಥಾನಕ್ಕಾಗಿ ಅಧಿಕಾರದ ದುರಾಸೆಯಿಂದ ಅಂಬೇಡ್ಕರ್ ಅವರಿಗೆ ಅಗೌರವ ತರುವುದು ಸರಿಯಲ್ಲ ಎಂದು ಹೇಳಿದರು.
ಹಳ್ಳಿ ಹಳ್ಳಿಗಳಿಗೂ ವಿಸ್ತರಿಸಿದ ಸಾರಾಯಿ
ಹಿಂದಿನ ಬಾರಿ ಶಾಸಕರಾಗಿದ್ದಂತಹ ಹರತಾಳು ಹಾಲಪ್ಪನವರು ಇಡೀ ಕ್ಷೇತ್ರದಲ್ಲಿ ಸಾರಾಯಿ ಅಂಗಡಿಗೆ ಲೈಸನ್ಸ್ ನೀಡುವ ಮೂಲಕ ಕುಡುಕರ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಶಾಸಕರಾಗಿ ಆಯ್ಕೆಯಾದ ಗೋಪಾಲಕೃಷ್ಣ ಬೇಳೂರು ಹಳ್ಳಿ ಹಳ್ಳಿಗೂ ಸಾರಾಯಿ ಸಿಗುವ ಹಾಗೆ ಮಾಡುವ ಮೂಲಕ, ನಿಜವಾಗಿ ಕುಡುಕರ ಕ್ಷೇತ್ರವನ್ನಾಗಿ ಹಾಲಿ ಶಾಸಕರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳಿ ಹಳ್ಳಿಗೂ ಸಾರಾಯಿ ಸಿಗುವ ಹಾಗೆ ಮಾಡಿದ ಸೂತ್ರದಾರ ಶಾಸಕರಾಗಿದ್ದಾರೆ. ಅಕ್ರಮದ ವಿರುದ್ಧ ಅಬಕಾರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಅಬಕಾರಿ ಇಲಾಖೆ ಮುಂದೆ ಹಾಗೂ ಶಾಸಕರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪದ್ಧತಿಯನ್ನು ಮುಂದುವರಿಸಿದ ಹಾಲಿ ಶಾಸಕರು – ದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಭರ್ಮಪ್ಪ ಆಕ್ರೋಶ.
ಅಂಬೇಡ್ಕರ್ ಜಯಂತಿಯನ್ನು ರಾಜ್ಯ ದೇಶವಲ್ಲದೆ ಹಲವಾರು ವಿದೇಶಗಳಲ್ಲೂ ಸಹ ಆಚರಿಸಲಾಗುತ್ತದೆ. ಆದರೆ ತಾಲೂಕು ಆಡಳಿತ ನಡೆಸುತ್ತಿರುವ ಶಾಸಕರು ಅಧಿಕಾರಕ್ಕಾಗಿ ದೆಹಲಿಯಲ್ಲಿ ಕೂತು ಅಂಬೇಡ್ಕರ್ ಜಯಂತಿಯನ್ನು ಮರೆತಿರುವುದು ಸರಿಯಲ್ಲ ಎಂದು ದಲಿತ ಮುಖಂಡ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಭರ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ನಿರ್ಲಕ್ಷ್ಯ ಮಾಡಿರುವುದು ಇದೇ ಮೊದಲಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವುದನ್ನು ನಾವೆಲ್ಲ ನೋಡಿದ್ದೇವೆ. ಅವರ ಸಾವಿನಲ್ಲಿಯೂ ರಾಜಕಾರಣ ಮಾಡಿದವರು ಕಾಂಗ್ರೆಸ್ ಮುಖಂಡರು. ಬೇರೆ ನಾಯಕರ ಶವಸಂಸ್ಕಾರಕ್ಕೆ ನೂರಾರು ಕೋಟಿ ವೆಚ್ಚ ಮಾಡುವ ಇವರು ಅಂಬೇಡ್ಕರ್ ವಿಷಯದಲ್ಲಿ ನಿರ್ಲಕ್ಷ ವಹಿಸಲಾಗಿತ್ತು. ಕಾಂಗ್ರೆಸ್ ದಲಿತರನ್ನು ಬಳಸಿಕೊಂಡು ಓಲ್ಯೆಕೆ ರಾಜಕಾರಣ ಮಾಡುತ್ತ ಬಂದಿದೆ. ಇದೇ ಪದ್ಧತಿಯನ್ನು ನಮ್ಮ ತಾಲೂಕಿನ ಶಾಸಕರು ಮುಂದುವರಿಸಿಕೊಂಡು ಬಂದಿರುವುದು ಸರಿಯಲ್ಲ. ಶಾಸಕರು ಇದಕ್ಕೆ ಕಾರಣ ನೀಡಬೇಕು ಜೊತೆಗೆ ಕ್ಷಮೆ ಕೇಳಬೇಕು. ಇದೇ ಪದ್ಧತಿ ಮುಂದುವರೆದರೆ ದಲಿತ ಸಂಘರ್ಷ ಸಮಿತಿ ಹಾಗೂ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ರೇವಪ್ಪ, ಬಿಜೆಪಿ ಎಸ್ ಸಿ ಮೋರ್ಚದ ಅಧ್ಯಕ್ಷ ರವಿಕುಮಾರ್ ಪ್ರಮುಖರಾದ ಸುಬ್ಬಣ್ಣ, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಕೃಷ್ಣಮೂರ್ತಿ ಇದ್ದರು.





