ಸಾಗರ : ತಾಲೂಕಿನ ಅಡ್ಡೇರಿ ಗ್ರಾಮದ ಅನಿಲ್ ಎಂಬವರು ಕಳೆದ 30 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ 15 ಗುಂಟೆ ಜಮೀನನ್ನು ಅರಣ್ಯಾಧಿಕಾರಿಗಳು ತೆರವು ಮಾಡಿರುವುದನ್ನು ಖಂಡನೀಯ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನಂದಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಸಂತ್ರಸ್ತರಾದ ಇವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸಾಲ ಮಾಡಿ 15 ಗುಂಟೆ ಜಮೀನಿನಲ್ಲಿ ಅಡಿಕೆ ತೋಟವನ್ನು ಬೆಳೆಸಿದ್ದರು. ಇದಲ್ಲದೆ ಇವರ ಜಮೀನಿನ ಸುತ್ತಮುತ್ತ ಹಲವಾರು ರೈತರ ಜಮೀನಿದೆ. ಹೀಗಿದ್ದರೂ ಸಹ ಕೇವಲ 15 ಗುಂಟೆ ಜಮೀನು ತೆರವು ಮಾಡುವ ಅವಶ್ಯಕತೆ ಏನಿತ್ತು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಅಧಿಕಾರದಲ್ಲಿದ್ದವರು ಅಧಿಕಾರಿಗಳ ಮೇಲೆ ಒತ್ತಡ
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಕೇವಲ 15 ಗುಂಟೆ ಜಮೀನು ಒತ್ತುವರಿ ತೆರವು ದುರುದ್ದೇಶದಿಂದ ಕೂಡಿದೆ. ಅಧಿಕಾರದಲ್ಲಿದ್ದವರು ಅಧಿಕಾರಿಗಳ ಮೇಲಿನ ಒತ್ತಡವೇ ಮೂಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಳುವಾಯಿತೆ ಪಕ್ಷ ಬದಲಾವಣೆ
ಅನಿಲ್ ಎಂಬುವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಇತ್ತೀಚಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರಿದ್ದರು. ಈ ಹಿನ್ನೆಲೆಯಲ್ಲಿ ಜಮೀನನ್ನು ಒತ್ತುವರಿ ತೆರವು ಮಾಡಲು ಒತ್ತಡ ಹಾಕಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಬೇಕು
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಒತ್ತುವರಿ ಮಾಡಿಕೊಂಡ ಎಲ್ಲ ಜಮೀನನ್ನು ತೆರವುಗೊಳಿಸಿ, ಕೊನೆಯದಾಗಿ ಈ 15 ಗುಂಟೆ ಜಮೀನು ಒತ್ತುವರಿ ತೆರವು ಮಾತ್ರ ಬಾಕಿ ಉಳಿದಿದೆ ಎನ್ನುವ ರೀತಿಯಲ್ಲಿ ತಿರುವುಗೊಳಿಸಿರುವುದಕ್ಕೆ ಅಧಿಕಾರಿಗಳಿಗೆ ಶಾಸಕರಿಂದ ರಾಷ್ಟ್ರಪ್ರಶಸ್ತಿ ಕೊಡಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ
ಸಾಗರ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು, ಶಾಸಕರು ಅವುಗಳ ಬಗ್ಗೆ ಗಮನ ಹರಿಸದೆ, ರೈತರು ಒತ್ತುವರಿ ಮಾಡಿಕೊಂಡ ಜಮೀನನ್ನು ತೆರವುಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ.
ಜೊತೆಗೆ ಇದೇ ರೀತಿ ರೈತರಿಗೆ ಅಧಿಕಾರಿಗಳು ತೊಂದರೆ ಕೊಟ್ಟರೆ ಸಂಸದರು ಹಾಗೂ ಶಾಸಕರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಯ ಸಂಪೂರ್ಣ ವಿಡಿಯೋ





