ಸಾಗರ : ವಿರೋಧ ಪಕ್ಷದವರು ಟೀಕೆ ಮಾಡುತ್ತಾ ಕೂರಲಿ, ಸಾಗರ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅವರು ತಾಲ್ಲೂಕಿನ ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿಯ ಸರ್ಕಲ್ ನ್ನು ಹೈಟೆಕ್ ಆಗಿ ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾತನಾಡಿದರು.
ಅಭಿವೃದ್ಧಿಯಲ್ಲಿ ಯಾವುದೇ ಹಿನ್ನಡೆಯಾಗದಂತೆ ಸಾಗರ ಹಾಗೂ ಹೊಸನಗರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಹಲವು ರಸ್ತೆಗಳನ್ನ ನಿರ್ಮಾಣ ಮಾಡಲಾಗಿದೆ. ಹಲವು ಚಿಂತನೆಗಳಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವು ಕಡೆ ನಂದಿನಿ ಪಾರ್ಲರ್ ಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ಆನಂದಪುರದಿಂದ ರಿಪ್ಪನ್ ಪೇಟೆ ಸರ್ಕಲ್ ಅವರಿಗೆ ಅಭಿವೃದ್ಧಿಪಡಿಸಲು ಸುಮಾರು 27.5 ಕೋಟಿಗಳನ್ನ ಈಗಾಗಲೇ ನೀಡಲಾಗಿದೆ. ರಿಪ್ಪನ್ ಪೇಟೆ ಹಾಗೂ ಯಡೇಹಳ್ಳಿ ಸರ್ಕಲ್ ನ್ನು ಹೈಟೆಕ್ ಆಗಿ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ. ಯಡೇಹಳ್ಳಿ ಸರ್ಕಲ್ ನಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ, ಹೈ ಮಾಸ್ಕ್ ಲೈಟ್ ನಿರ್ಮಾಣ ಮಾಡಲಾಗುವುದೆಂದು ಹೇಳಿದರು.
*1 ಕೋಟಿಯಲ್ಲಿ ಗಾಣಿಗನಕೆರೆ ಅಭಿವೃದ್ಧಿ*
ಆನಂದಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಾಣಿಗನ ಕೆರೆಯನ್ನು ಒಂದು ಕೋಟಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಕೆರೆಯ ನೀರು ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ವಿಶೇಷವಾಗಿ ವಾಕಿಂಗ್ ಪಾತ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಸಾಗರದ ತಾಯಿ ಮಗು ಆಸ್ಪತ್ರೆ, ಜನರಲ್ ಆಸ್ಪತ್ರೆ ಹಾಗೂ ಆನಂದಪುರದ ಸಮುದಾಯ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅನುದಾನ ನೀಡಲಾಗಿದೆ ಎಂದು ಹೇಳಿದರು.
ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಕುಮಾರಿ, ಮಾಜಿ ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್, ಮುಖಂಡರಾದ ಉಮೇಶ್ ಎನ್, ಆನಂದ ಹರಟೆ, ಮಂಜುನಾಥ್ ದಾಸನ್, ರವಿಕುಮಾರ್ ಯಡೇಹಳ್ಳಿ, ನಜರುಲ್ಲಾ ಖಾನ್, ಅಶ್ವಿನ್, ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





