ಸಾಗರ : ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ.
ಇದರ ಜೊತೆಗೆ ಬರುವಂತಹ ಬಡ ಮಕ್ಕಳಿಗೆ ಕಲಿಕೆಗೆ ಪೂರಕವಾದಂತಹ ಉತ್ತಮವಾದ ವಾತಾವರಣವನ್ನು ಕಲ್ಪಿಸಲು ಸಹ ವಿಫಲವಾಗಿರುವುದು ಅಧಿಕಾರಿಗಳ ಉತ್ತಮ ಕಾರ್ಯಕ್ಕೆ ಕೈಗನ್ನಡಿಯಾಗಿದೆ.
ಸ್ಪಂದಿಸದ ಗ್ರಾಮ ಪಂಚಾಯಿತಿ ಅಧಿಕಾರಿಗಳು
ಸಾಗರ ತಾಲೂಕಿನ ಆನಂದಪುರದ ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಬರುವ ಅಂಗನವಾಡಿ ಕೇಂದ್ರದ ಮೇಲ್ಚಾವಣಿಯ ಹೆಂಚುಗಳು ಒಡೆದು ನೀರು ಸೋರುತಿದ್ದು, ಮಕ್ಕಳು ಮಳೆಯಲ್ಲಿಯೇ ಕೂತು ಪಾಠ ಕೇಳುವಂತ ಪರಿಸ್ಥಿತಿ ಹಾಗೂ ಮಳೆಯಲ್ಲಿ ನೆನೆದು ಗೋಡೆ ಬೀಳಬಹುದು ಎನ್ನುವ ಭಯದಿಂದ ದಿನ ಕಳೆಯುವಂತ ಪರಿಸ್ಥಿತಿ ಉಂಟಾಗಿದ್ದರು ಸಹ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇಲ್ಲಿಯವರೆಗೆ ಗಮನ ಹರಿಸಿಲ್ಲ.
ಅಂಗನವಾಡಿಯ ಶಿಕ್ಷಕಿ ಗ್ರಾಮಾಡಳಿತಕ್ಕೆ ಅರ್ಜಿಯನ್ನು ನೀಡಿದ್ದರೂ, ಮನವಿಯನ್ನು ಮಾಡಿದರೂ, ಖುದ್ದು ಭೇಟಿಯಾಗಿದ್ದರು ಸಹ ಇಲ್ಲಿವರೆಗೆ ಯಾವುದೇ ಪ್ರಯೋಜನವಾಗದೆ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಗಮನಹರಿಸದ ಮೆಸ್ಕಾಂ ಇಲಾಖೆ
ಅಂಗನವಾಡಿ ಕೇಂದ್ರದಲ್ಲಿ ಮೀಟರ್ ಬೋರ್ಡ್ ಹಾಗೂ ಕೆಲವು ಕಡೆ ಗ್ರೌಂಡಿಂಗ್ ಆಗಿ ಸಮಸ್ಯೆಗಳು ಆಗುತ್ತಿರುವ ಬಗ್ಗೆ ಶಿಕ್ಷಕಿ ಮೆಸ್ಕಾಂ ಇಲಾಖೆಗೆ ತಿಳಿಸಿದ್ದರೂ ಸಹ ಮೆಸ್ಕಾಂ ಇಲಾಖೆ ಅಧಿಕಾರಿಗಳು ಸಹ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಶಿಕ್ಷಕಿಯಿಂದಲೇ ಮೇಲ್ಚಾವಣಿ ದುರಸ್ತಿ

ಮಕ್ಕಳಿಗೆ ಆಗುತ್ತಿರುವ ಅಪಾಯವನ್ನು ಅರಿತ ಶಿಕ್ಷಕಿ ಒಬ್ಬರ ಸಹಾಯವನ್ನು ಪಡೆದು ಶಿಕ್ಷಕಿಯೇ ಮೇಲ್ಚಾವಣಿಯನ್ನು ಹತ್ತಿ ತಾತ್ಕಾಲಿಕವಾಗಿ ಸರಿಪಡಿಸಿದ್ದಾರೆ. ಮಳೆಗಾಲದಲ್ಲಿ ಮೇಲ್ಚಾವಣಿ ಜಾರುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಸಹ ಮಕ್ಕಳಿಗೆ ತೊಂದರೆ ಆಗಬಾರದು ಎನ್ನವ ಕಾರಣಕ್ಕಾಗಿ ಸಂದಿಗ್ದ ಪರಿಸ್ಥಿತಿಯಲ್ಲಿಯು ಕಾರ್ಯನಿರ್ವಹಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಮಗೆ ತಾವೇ ಹೇಗೆ ಕೆಲಸವನ್ನು ನಿರ್ವಹಿಸುತ್ತಿದ್ದೇವೆ ಎಂಬುದನ್ನ ಪ್ರಶ್ನೆ ಹಾಕಿಕೊಳ್ಳಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಗಬ್ಬು ನಾರುತ್ತಿರುವ ತೆರೆದ ಬಾವಿ

ಅಂಗನವಾಡಿ ಕೇಂದ್ರದ ಪಕ್ಕದಲ್ಲಿಯೇ ಸುಸರ್ಜಿತವಾದ ತೆರೆದ ಬಾವಿ ಇದ್ದರೂ ಸಹ ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿ ಕಸ ಕಡ್ಡಿಗಳಿಂದ ಗಬ್ಬುನಾರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಆದ್ದರಿಂದ ಸಣ್ಣ ಮಕ್ಕಳ ಬಗ್ಗೆ ಅಧಿಕಾರಿಗಳಿಗೆ ಕಿಂಚಿತ್ತು ಕರುಣೆ ಇದ್ದರೆ , ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೂಡಲೇ ಸರಿಪಡಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.





