ಸಾಗರ : ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ಅವರು ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ವಾಗ್ದಾಳಿ ನಡೆಸಿದ್ದಾರೆ.
ಅವರು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರ ಮಾರಿಕಾಂಬಾ ದೇವಸ್ಥಾನದ ಗೌರವಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರಾದ ಕಾರಣ, ಸಾವಿರಾರು ಭಕ್ತರು ಜಾತ್ರೆಗೆ ಬರುವ ಕಾರಣ ಮೂಲಭೂತ ಸೌಕರ್ಯ, ಸ್ವಚ್ಛತೆಗೆ ಆದ್ಯತೆ ನೀಡಿ ಜನತೆಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಸಭೆ ಮಾಡಿದ್ದಕ್ಕೆ ಜಾತ್ರೆಯಲ್ಲಿ ಶಾಸಕರ ಹಸ್ತಕ್ಷೇಪ ಎಂದು ಕೀಳುಮಟ್ಟದ ರಾಜಕಾರಣ ಮಾಡಬೇಡಿ ಎಂದು ಹರಿಹಾಯ್ದರು.
ಮಾಧ್ಯಮದ ಮುಂದೆ ರಾಜಕಾರಣ ಮಾಡಬೇಡಿ
ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳುವುದಕ್ಕಾಗಿ ಮಾಧ್ಯಮದ ಮುಂದೆ ಶಾಸಕರ ವಿರುದ್ಧ ಹೇಳಿಕೆ ನೀಡುವ ಮೂಲಕ ದೊಡ್ಡ ನಾಯಕರಾಗುವುದಿಲ್ಲ. ಜನಗಳ ಮುಂದೆ ಹೋಗಿ ಸಮಸ್ಯೆಗಳ ಬಗ್ಗೆ ರಾಜಕಾರಣ ಮಾಡಬೇಕು ಎಂದು ತಿಳಿ ಹೇಳಿದರು.
ಶಾಸಕರಿಗೆ ಪ್ರಚಾರದ ಗೀಳಿಲ್ಲ
ಶಾಸಕರಿಗೆ ಪ್ರಚಾರದ ಗೀಳಿಲ್ಲ . ಜವಾಬ್ದಾರಿ ಇದೆ. ಹಾಗಾಗಿ ಮುಂಬರುವ ಕಡ್ಲೆಹಂಕ್ಲು ಮಾರಿಕಾಂಬ ಜಾತ್ರೆ ವ್ಯವಸ್ಥಿತವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಪೂರ್ವಭಾವಿ ಸಭೆ ನಡೆಸಿದ್ದರು. ಶಾಸಕರ ವಿರುದ್ಧ ಮಾತನಾಡುವ ನೀವು, ಈ ಹಿಂದೆ ತಾಲೂಕು ಜಿಲ್ಲಾ ಪಂಚಾಯಿತಿ ಹಾಗೂ ಕೆಡಿಪಿ ಸದಸ್ಯರಾಗಿದ್ದ ನೀವು ಆನಂದಪುರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು.
ರತ್ನಾಕರ್ ಅವರ ಭ್ರಷ್ಟಾಚಾರ ಹಾಗೂ ದುರಾಡಳಿತ ಇರುವಕ್ಕಿಯ ವಿಶ್ವವಿದ್ಯಾಲಯದ ಒಂದೊಂದು ಬೇಲಿ ಕಂಬ ಹಾಗೂ ಮರದ ತುಂಡುಗಳು ಹೇಳುತ್ತವೆ ಎಂದು ವ್ಯಂಗ್ಯವಾಡಿದರು. ಅರಣ್ಯ ಇಲಾಖೆಯವರಿಗೆ ಹೊಡೆದು ನಾಟ ಕದ್ದು ಜೈಲಿಗೆ ಹೋದ ವ್ಯಕ್ತಿಗೆ ಶಾಸಕರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ರತ್ನಾಕರ್ ಹೊನಗೋಡು ಮೂಲೆಗುಂಪು
ಮಾಜಿ ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್ ಮಾತನಾಡಿ, ರತ್ನಾಕರ್ ಹೊನಗೋಡು ಅವರು ಬಿಜೆಪಿಗೆ ಹೋದೆ ಹೋದ ನಂತರ ಅವರಿಗೆ ಯಾವುದೇ ಹುದ್ದೆ ನೀಡದೆ ಮೂಲೆಗುಂಪು ಮಾಡಲಾಗಿದೆ. ಹಾಗಾಗಿ ತಮ್ಮ ಅಸ್ತಿತ್ವದ ಪ್ರಶ್ನೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಆಗಾಗ ಪತ್ರಿಕಾಗೋಷ್ಠಿ ಮಾಡಿ ಶಾಸಕರ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕೆ ಮಾಡಿದರು.
ಅಲ್ಲದೆ ರತ್ನಾಕರ್ ಹೊನಗೋಡು ಅವರು ಬೇಳೂರು ಅವರ ಕೃಪಾ ಕಟಾಕ್ಷ ಹಾಗೂ ಭಿಕ್ಷೆಯಿಂದ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತಿ ಸದಸ್ಯರಾಗಿರುವುದನ್ನು ಮರೆಯಬಾರದು. ಇನ್ನು ಮುಂದಾದರೂ ಸತ್ಯವಿರುವ ವಿಚಾರಗಳ ಬಗ್ಗೆ ಹೋರಾಟ ಮಾಡಿ, ನಿಮ್ಮದೇ ಕೇಂದ್ರ ಸರ್ಕಾರವಿದ್ದು, ಸಂಸದರ ನಿಯೋಗದ ಮೂಲಕ ರೈತ ಪರವಾದ ಹೋರಾಟ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಘಟಕದ ಅಧ್ಯಕ್ಷರುಗಳಾದ ನಜರುಲ್ಲಾ ಖಾನ್, ಗಜೇಂದ್ರ, ಕಲೀಮುಲ್ಲಾ , ಪ್ರಮುಖರಾದ ರಮಾನಂದ ಸಾಗರ್, ವಿಜಯ್ ಗೌಡ್ರು ,ಉಮೇಶ್ ಎನ್, ಬಸವರಾಜ್, ಈಶ್ವರಪ್ಪ, ಮೋಹನ್, ಆಸಿಫ್, ಲೋಕೇಶ್, ಲಿಂಗರಾಜ್ ಅಮೀರ್, ಅರುಣ್ ಗೌಡ್ರು , ಸಿರಿಜಾನ್ ಇದ್ದರು.





