ಸಾಗರ : ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒಕ್ಕೊರಲ ಒತ್ತಾಯ ಮಾಡಿದ್ದಾರೆ.
ಆನಂದಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಲಿಂಗರಾಜ್ ಗೇರುಬೀಸು ಅವರು, ಸಾಗರ ಭೌಗೋಳಿಕ ಹಾಗು ಸಾಂಸ್ಕೃತಿಕವಾಗಿ ವೈಶಿಷ್ಟ್ಯಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಜಿಲ್ಲೆಯಾಗಲು ಎಲ್ಲಾ ಅರ್ಹತೆ ಹೊಂದಿರುವ ಹಾಗೂ ಹೋರಾಟಗಳು ಸಹ ನಡೆಯುತ್ತಿರುವ ಸಾಗರ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ತಾಲೂಕನ್ನು ಸುಭದ್ರವಾಗಿ ಕಟ್ಟಿದಂತ ಹಾಗೂ ತಾಲೂಕಿಗೆ ಅವಶ್ಯಕತೆ ಇರುವ ಶಾಲಾ ಕಾಲೇಜು, ಆಸ್ಪತ್ರೆ , ಸರ್ಕಾರಿ ಕಚೇರಿ ಸೇರಿದಂತೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಕೆಲಸವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಮಾಡಿದ್ದರು. ಅವರ ಮಾರ್ಗದರ್ಶನ ಗೋಪಾಲಕೃಷ್ಣ ಬೇಳೂರು ಅವರು ಸಹ ನಡೆದುಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ವಿಶೇಷವಾಗಿ ಸಾಗರ ಕ್ಷೇತ್ರಕ್ಕೆ ಸಚಿವ ಸ್ಥಾನ ಮೊದಲ ಆದ್ಯತೆಯಲ್ಲಿ ಸಿಗುತ್ತಿತ್ತು. ಆದರೆ ಪ್ರಸ್ತುತ ವ್ಯವಸ್ಥಿತವಾದ ಸಂಚಿನಿಂದಾಗಿ ಸಾಗರ ತಾಲೂಕಿಗೆ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಎಲ್ಲಾ ತಾಲೂಕುಗಳಿಂದ ಸಾಗರವು ವಿಶೇಷವಾದ ಸೌಲಭ್ಯಗಳನ್ನು ಹೊಂದಿದ್ದು, ನಮ್ಮ ತಾಲೂಕನ್ನು ಅವಲಂಬಿಸುತ್ತಿದ್ದಾರೆ. ಹೀಗಿದ್ದರೂ ರ ಸಹ ನಮ್ಮ ಕ್ಷೇತ್ರಕ್ಕೆ ಸಚಿವ ಸ್ಥಾನ ತಪ್ಪಲು ಕಾರಣವೇನು ಎಂಬುದು ಅರ್ಥವಾಗುತ್ತಿಲ್ಲ. ಕಾಣದ ಕೈಗಳ ಕೆಲಸವೋ ಅಥವಾ ನಮ್ಮಲ್ಲಿರುವ ಒಗ್ಗಟಿನ ಕೊರತೆಯೋ ಎಂಬುದು ನಮ್ಮನ್ನು ಕಾಡುತ್ತಿದೆ ಎಂದು ಹೇಳಿದರು.
ಸಾಗರ ತಾಲೂಕು ಇನ್ನಷ್ಟು ಸಮಗ್ರವಾಗಿ ಅಭಿವೃದ್ಧಿ ಆಗಬೇಕಾದರೆ ಸಚಿವ ಸ್ಥಾನ ಸಿಗಲೇಬೇಕು. ತಾಲೂಕಿನ ಜನ ಬಹು ಹಿಂದಿನಿಂದಲೂ ಬಗುರ್ ಹುಕುಂ ಸಮಸ್ಯೆ, ಶರಾವತಿ ಮುಳುಗಡೆ ಸಮಸ್ಯೆ ಅರಣ್ಯ ಕಾಯಿದೆ ಸಮಸ್ಯೆಗಳಿಂದ ಮುಕ್ತಿ ನೀಡಿ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಡಲು ಅಧಿಕಾರ ಬೇಕು ಎಂದು ಆಗ್ರಹಿಸಿದರು.
ಮಾತನಾಡದ ಕಾಂಗ್ರೆಸ್ ಜಿಲ್ಲಾ ಸಮಿತಿ *
ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯು ಮೌನವಾಗಿರುವುದು ಸರಿಯಲ್ಲ. ರಾಜ್ಯ ಹಾಗೂ ರಾಷ್ಟ್ರ ಸಮಿತಿಯ ಮೇಲೆ ಒತ್ತಡ ಹಾಕುವ ಕೆಲಸವನ್ನು ಸಹ ಮಾಡುತ್ತಿಲ್ಲ ಎಂದು ಸ್ವ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ತತ್ವ ಅಧಿಕಾರ ವಿಕೇಂದ್ರಿಕರಣ*
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಅಧಿಕಾರ ವಿಕೇಂದ್ರೀಕರಣ ಕೇಂದ್ರ ತತ್ವವನ್ನು ಅನುಸರಿಸಿಕೊಂಡು ಬಂದಿದೆ. ಈ ಬಾರಿಯ ಮೊದಲ ಹಂತದಲ್ಲಿ ಸೊರಬ ಕ್ಷೇತ್ರದ ಮಧುಬಂಗಾರಪ್ಪ ನವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆ ಹಂತದಲ್ಲಿ ನಾವೆಲ್ಲರೂ ಸಹ ಸಂತೋಷಪಟ್ಟಿದ್ದೇವೆ. ಅಧಿಕಾರ ವಿಕೇಂದ್ರೀಕರಣ ತತ್ವವು ಕೇವಲ ಸ್ಲೋಗನ್ ಆಗಿ ಉಳಿಯದೆ ಅಧಿಕಾರ ನಿಜವಾಗಿ ಹಂಚಿಕೆಯಾಗಬೇಕು ಎಂದು ಒತ್ತಾಯ ಮಾಡಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಮುಂದೆ ಬರುವ ಎಲ್ಲಾ ಚುನಾವಣೆಯಲ್ಲೂ ಸಹ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿಯವರು ಹೆಚ್ಚಿನ ಒತ್ತಡ ಹೇರಬೇಕು. ರಾಜ್ಯ ಸಮಿತಿಯು ಸಹ ಸಾಗರ ಅಭಿವೃದ್ಧಿ ಕಡೆ ಗಮನಹರಿಸಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಆಚಾಪುರ ಘಟಕದ ಅಧ್ಯಕ್ಷ ಖಲಿಮುಲ್ಲಾ ಖಾನ್ ಮಾತನಾಡಿ, ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳು ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಧ್ವನಿ ಎತ್ತದೇ ಇರುವುದು ಬೇಸರದ ಸಂಗತಿಯಾಗಿದೆ. ಶಾಸಕರು ದಿನದ 18 ಗಂಟೆಯೂ ಸಹ ಜನರ ಸಂಪರ್ಕದಲ್ಲಿ ಇರುತ್ತಾರೆ. ಯಾವುದೇ ತುರ್ತು ಕರೆಗೂ ಸಹ ಸ್ಪಂದನೆ ನೀಡುತ್ತಾರೆ. ಸರ್ಕಾರದ ಕೆಲಸಗಳಿಗೆ ವೇಗ ಹಾಗೂ ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಚಿವ ಸ್ಥಾನ ನೀಡಲೇಬೇಕು. ಸಚಿವ ಸ್ಥಾನ ನೀಡದಿದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಈಶ್ವರಪ್ಪ ಮಾತನಾಡಿ, ಸಾಗರವು ತಾಲೂಕು ರಾಜ್ಯ ಹಾಗೂ ರಾಷ್ಟ್ರಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದೆ. ತಾಲೂಕು ಮಾತ್ರವಲ್ಲದೆ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಜೇಂದ್ರ ಯಾದವ್, ನಜರುಲ್ಲಾ ಖಾನ್, ರಮಾನಂದ, ಅಮೀರ್, ಶರತ್ ನಾಗಪ್ಪ, ರಹಮತ್ ಉಲ್ಲಾ, ಮೋಹನ್, ಬಸವರಾಜ್, ಮುಕುಂದ, ಚೌಡಪ್ಪ, ವಿಜಯ್ ಕುಮಾರ್, ಸಿರಾಜ್ ,ಆಸಿಫ್ ಇನ್ನಿತರರು ಉಪಸ್ಥಿತರಿದ್ದರು.





