ಆನಂದಪುರ: ಮಾರಿಕಾಂಬಾ ಜಾತ್ರಾ ಸಮಿತಿ ಅಧ್ಯಕ್ಷ ವೆಂಕಟೇಶ್ ಹಾಗೂ ಅವರ ತಂಡ ಜಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ಶ್ಲಾಘನೆ ಮಾಡಿದರು.
ಅವರು ಆನಂದಪುರದ ಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರಾ ಸಮಿತಿ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಹಕಾರ ಪಡೆದು ಜಾತ್ರೆ ನಡೆಸುವುದು ಸಾಮಾನ್ಯದ ವಿಷಯವಲ್ಲ. ಬಂದಂತಹ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಜಾತ್ರೆಯ ಜೊತೆ ಜೊತೆಗೆ ಮಾರಿಕಾಂಬಾ ದೇವಿಯ ತವರು ಮನೆ ಶಿಲಾಮಯ ದೇವಸ್ಥಾನವನ್ನು ಸಹ ನಿರ್ಮಾಣ ಮಾಡುತ್ತಿರುವುದು ಸಾಮಾನ್ಯದ ವಿಷಯವಲ್ಲ ಎಂದು ಜಾತ್ರಾ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಚಾಪುರ ಕೃಷಿ ಪತ್ತಿನ ಸಹಕಾರದ ಸಂಘದ ಅಧ್ಯಕ್ಷ ಕೆ ಆರ್ ರಾಜು ಮಾತನಾಡಿ, ಮಾರಿಕಾಂಬ ಜಾತ್ರೆಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ಇಂತಹ ಜಾತ್ರೆಯನ್ನು ಸಮಿತಿಯ ಸಂಘಟನಾತ್ಮಕ ಪ್ರಯತ್ನದ ಫಲವಾಗಿ ವಿಜೃಂಭಣೆಯಿಂದ ನಡೆಯುತ್ತಿದೆ. ಜಿಲ್ಲೆಯಲ್ಲಿ ಆನಂದಪುರಕ್ಕೆ ವಿಶೇಷವಾದ ಸ್ಥಾನವಿದೆ. ಸಂಸದರಾದ ಬಿ .ವೈ ರಾಘವೇಂದ್ರ , ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಅವರ ಕೊಡುಗೆ ಅಪಾರವಾದುದು. ದೇವಿಯ ಕೃಪೆಯಿಂದ ಆನಂದಪುರ ಇನ್ನಷ್ಟು ಅಭಿವೃದ್ಧಿ ಆಗಲಿ ಎಂದು ಆಶಿಸಿದರು.
ಮಾರಿಕಾಂಬಾ ತವರು ಮನೆ ಶಿಲಾಮಯ ದೇವಸ್ಥಾನ ಲೋಕಾರ್ಪಣೆ
ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಮಾರಿಕಾಂಬ ಜಾತ್ರೆ ಯಶಸ್ವಿಯಾಗಲು ಸಹಕರಿಸಿದ ಜಾತ್ರಾ ಸಮಿತಿ ,ಗ್ರಾಮಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದರು. 
ಭಕ್ತರ ಸಹಕಾರದಿಂದ ತವರು ಮನೆಯ ಶಿಲಾಮಯ ದೇವಸ್ಥಾನದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಬರುವ ಜನವರಿ ತಿಂಗಳಿನಲ್ಲಿ ಲೋಕಾರ್ಪಣೆ ಗೊಳಿಸುವ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಇದಕ್ಕೆ ಭಕ್ತರು ತನು ಮನ ಧನ ಸಹಕಾರ ನೀಡಬೇಕು ಎಂದು ಕೋರಿದರು.
ಜಾತ್ರಾ ಸಮಿತಿಯ ಕಾರ್ಯದರ್ಶಿ ಗುರುರಾಜ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ಜಾತ್ರಾ ಸಮಿತಿಯ ಉಪಾಧ್ಯಕ್ಷರಾದ ಜಯದೇವಪ್ಪ ಗೌಡ್ರು, ನಾರಿ ಲೋಕಪ್ಪ, ಈರಪ್ಪ ಪ್ರಮುಖರಾದ ಕಾರ್ತಿಕ್, ರಾಘವೇಂದ್ರ, ಮಂಜುನಾಥ್, ಸುಬ್ರಹ್ಮಣ್ಯ, ಸುರೇಶ್, ಕರಡಿಮನೆ, ಜಯಪ್ಪ, ಈಶ್ವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





