ಸಾಗರ : ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ
ಸಾಗರ : ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ತಾಲೂಕಿನ ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಸೆ.1 ರ ರಾತ್ರಿ ಸಾಗರ ತಾಲೂಕು ಯಡೇಹಳ್ಳಿ ಗ್ರಾಮದ ರಥಬೀದಿಯಲ್ಲಿರುವ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರದೀಶ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಪ್ರದೀಶ್ ಕೆಲಸದ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸೆ. 1 ರ ರಾತ್ರಿ 10.30 ರಿಂದ ಸೆ.2 ರ ಬೆಳಗ್ಗೆ 6 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಅವರ ಮನೆಯ ಕಿಟಕಿಯ ಮೂಲಕ ಮನೆಯ ಮುಂದಿನ ಬಾಗಿಲ ಚಿಲಕವನ್ನು ತೆಗೆದು ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಮನೆಯ ಕಿಚನ್ ರೂಮ್ ನಲ್ಲಿದ್ದ ಗಾಡ್ರೆಜ್ ಬೀರುವಿನ ಇನ್ನರ್ ಲಾಕ್ ಅನ್ನು ಕೀ ಸಹಾಯದಿಂದ ತೆಗೆದಿದ್ದಾರೆ.
ಗಾಡ್ರೆಜ್ ಬೀರುವಿನಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. 45 ಗ್ರಾಂ ತೂಕದ ಚಿನ್ನದ ಮಾಂಗಲ್ಯಸರ, 32 ಗ್ರಾಂ ತೂಕದ ಐದು ಚಿನ್ನದ ಕಿವಿಯೋಲೆ, 3 ಗ್ರಾಂ ತೂಕದ ಒಂದು ಬ್ರಾಸ್ ಲೈಟ್, 30 ಗ್ರಾಂ ಒಂದು ಜೊತೆ ಬೆಳ್ಳಿ ಕಾಲ್ ಚೈನ್, 10 ಗ್ರಾಂ ತೂಕದ ಎರಡು ಜೊತೆ ಬೆಳ್ಳಿ ಕಾಲುಂಗುರ ಸೇರಿ ಒಟ್ಟು 80 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ 40 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.





