ಶಿವಮೊಗ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ
ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರತ್ನಕುಮಾರಿ ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದೇಶದ 48 ಶಿಕ್ಷಕರು ಈ ಪ್ರಶಸ್ತಿ ಆಯ್ಕೆ ಮಾಡಿದ್ದು, ಅವರಲ್ಲಿ ಶಿವಮೊಗ್ಗದ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವಿ ಸಲ್ಲಿಸುತ್ತಿರುವ ರತ್ನಕುಮಾರಿ ಒಬ್ಬರಾಗಿದ್ದಾರೆ.

ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಉತ್ತಮ ಸೇವೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಲ್ಲಿಸಿದ ಸೇವೆಯ ಹಿನ್ನೆಲೆಯಲ್ಲಿ ಈ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ಈ ರಾಷ್ಟ್ರೀಯ ಪ್ರಶಸ್ತಿಯಿಂದಾಗಿ ಶಿವಮೊಗ್ಗ ಜಿಲ್ಲೆಗೆ ಹಾಗೂ ಶಿಕ್ಷಕ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ರಾಷ್ಟ್ರಪತಿಯಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ
ಸೆಪ್ಟೆಂಬರ್ 5ರಂದು ಶಿಕ್ಷಕ ದಿನಾಚರಣೆ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ರತ್ನಕುಮಾರಿ ಅವರಿಗೆ ಪ್ರದಾನ ಮಾಡಲಿದ್ದಾರೆ.

ಆಟ ಹಾಗೂ ಪರಿಸರ ಜ್ಞಾನದೊಂದಿಗೆ ಪಾಠ : ಶಿಕ್ಷಕಿ ರತ್ನಕುಮಾರಿ
ಶಿಕ್ಷಕಿ ರತ್ನಕುಮಾರಿಯವರು ತಮ್ಮದೇ ಆದ ಆಲೋಚನೆಯ ಮೂಲಕ ಆಟದೊಂದಿಗೆ ಪಾಠ ಹಾಗೂ ಪರಿಸರವನ್ನ ಸವಿಯುತ್ತ, ಅದರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುತ್ತ, ಮಕ್ಕಳಿಗೆ ಪರಿಸರದ ಬಗ್ಗೆ ವಿಶೇಷ ಜಾಗೃತಿ ಮೂಡಿಸುತ್ತಾ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸುವ ಕೆಲಸ ಮಾಡಿದ್ದಾರೆ.
ಒಂದರಿಂದ 7 ತರಗತಿಯವರೆಗೆ ಇರುವ ಈ ಶಾಲೆಯಲ್ಲಿ 52ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ವಿಶೇಷವೆಂದರೆ ಈ ಶಾಲೆಯಲ್ಲಿ ಸ್ಥಳೀಯ ಮಕ್ಕಳ ಸಂಖ್ಯೆ ಮೂರು ಮತ್ತೊಂದು. ಶಾಲೆಯ ಸುತ್ತಮುತ್ತಲಿನ ಏಳೆಂಟು ಕಿಲೋಮೀಟರ್ ಗಳಿಂದ ಈ ಶಾಲೆಗೆ ಮಕ್ಕಳು ಬರುತ್ತಿರುವುದು ಶಿಕ್ಷಕರ ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ.

ಈ ಶಾಲೆಗೆ 2011- 12 ರಲ್ಲಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಹಾಗೂ ಧನ್ವಂತರಿ ಪ್ರಶಸ್ತಿ ಕೂಡ ಈ ಶಾಲೆಗೆ ಲಭಿಸಿದೆ. ಶಾಲೆ ಆವರಣದಲ್ಲಿ 200 ಕ್ಕೂ ಹೆಚ್ಚು ಗಿಡಮರಗಳನ್ನು ಬೆಳೆಸಿದ್ದಾರೆ. ಜೊತೆಗೆ ಧನ್ವಂತರಿ ಔಷಧ ವನವನ್ನು ಸಹ ಬೆಳೆಸಿದ್ದಾರೆ. ಕಳೆದ 24 ವರ್ಷದಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಶಿಕ್ಷಕಿ, ಕಳೆದ 15 ವರ್ಷದಿಂದ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇವರ ಜೊತೆಗೆ ಸಹ ಶಿಕ್ಷಕರು ಸಹ ಕೈಜೋಡಿಸಿದ ಕಾರಣದಿಂದಾಗಿ ಉತ್ತಮ ಶಾಲೆಯಾಗಿ ಹೊರಹೊಮ್ಮಿದೆ.
ಶಾಲೆಯಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸಲು ನಾಲ್ಕು ಕಂಪನಿಗಳು ಸಹ ಕೈಜೋಡಿಸಿವೆ. ಜೊತೆಗೆ ಎಸ್ ಡಿಎಂಸಿ ಸದಸ್ಯರು ಸಹ ಶಾಲೆಯ ಬೆಳವಣಿಗೆಗೆ ಜೊತೆಯಲ್ಲಿರುವುದು ಶಾಲೆಯ ಬೆಳವಣಿಗೆಗೆ ಪೂರಕವಾಗಿದೆ.





