ಸಾಗರ – ಜಾನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್. ಸಿ. ಜಗದೀಶ್ ಹೇಳಿದರು.
ಅವರು ಕಣ್ಣೇಶ್ವರ ಜಾನಪದ ಕಲಾಸಂಘ ಕಣ್ಣೂರು ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾನಪದ ಕಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಜನರ ಜೀವನದ ಬದುಕಿನ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ಕಲೆಗಳನ್ನು ಉಳಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ. ಜಾನಪದಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ಜನರೊಂದಿಗೆ ಬಂದಿರುವ ಜನಪದ ಕಲೆ ಸಾಹಿತ್ಯವನ್ನು ಜೀವಂತಿಕೆಯಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ತುಂಬಾ ಅಗತ್ಯವಾಗಿದೆ. ಇಂದಿನ ಯುವಪೀಳಿಗೆ ಜಾನಪದವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿ. ಟಾಕಪ್ಪ ಕಣ್ಣೂರು ಮಾತನಾಡಿ, ಜಾನಪದ ತಾಯಿ ಬೇರು ಇದ್ದಂತೆ ಅದಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದೆ. ಜನರ ಬದುಕಿನೊಂದಿಗೆ ರೂಢಿಗತವಾಗಿ ಬಂದಿರುವ ಜನಪದ ಕಲೆ ಸಾಹಿತ್ಯ ಸಂಗೀತ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಜಾನಪದ ಬದುಕು ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಸದಾ ಚಟುವಟಿಕೆಯಿಂದ ಕೂಡಿರಲು ಜನಪದವೇ ಮೂಲ ಪ್ರೇರಣೆಯಾಗಿದೆ. ಜಗತ್ತಿನಲ್ಲಿ ಭಾರತದ ಜನಪದ ಪರಂಪರೆ ಅತ್ಯಂತ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ. ಅದರಲ್ಲೂ ಕರ್ನಾಟಕದ ಮಲೆನಾಡು ಜನಪದ ಕಲೆಗಳಿಗೆ ವಿಶೇಷವಾದ ಸ್ಥಾನಗಳಿವೆ. ಜನಪದವನ್ನು ಹಗುರವಾಗಿ ಕಾಣಬಾರದು. ಜನಪದ ಕಲೆಯನ್ನು ಆರಾಧಿಸುವವರು ವಿಶೇಷವಾಗಿ ಕಂಡುಬರುತ್ತಾರೆ. ಇಂತಹ ಕಲೆಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಕಲಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಕಸಾಪ ತಾಲೂಕ ಅಧ್ಯಕ್ಷ ವಿ.ಟಿ. ಸ್ವಾಮಿ ಮಾತನಾಡಿ, ನಮ್ಮ ದೇಶೀಯ ಕಲೆಗಳನ್ನು ಉಳಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ. ಜೀವನದ ಜೊತೆಯಲ್ಲಿಯೇ ಕರಗತವಾಗಿರುವ ಜನಪದ ಕಲೆಗಳ ಸಾಹಿತ್ಯ ವಿಶೇಷ ಸಂಸ್ಕೃತಿಯನ್ನು ಹೊಂದಿದ್ದು ಜನರ ಜೀವನದ ನೋವು ನಲಿವುಗಳನ್ನು ಹಾಗೂ ಜನರ ಮನಸ್ಸುಗಳನ್ನು ಕಟ್ಟುವಲ್ಲಿ ಹೆಚ್ಚು ಪ್ರಭಾವಶಾಲಿಯಾಗಿವೆ. ಇಂತಹ ಕಲೆಯನ್ನು ಉಳಿಸುವ ಕೆಲಸ ನಿರಂತರವಾಗಿ ಆಗಬೇಕಾಗಿದೆ ಎಂದು ಹೇಳಿದರು.
ಕಣ್ಣೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಟಿಕಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಆನಂದಪುರ ಕಸಾಪ ಅಧ್ಯಕ್ಷ ಬಿ.ಡಿ. ರವಿಕುಮಾರ್, ಕಣ್ಣೂರು ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ನಾಗರಾಜ್ ಸಂಗೀ, ಕೃಷಿ ವಿವಿಯ ಪ್ರಮುಖರಾದ ಡಾ. ನಾರಾಯಣ ಮಾವರ್ಕರ್. ಶಶಿಧರ್ ಕೆ ಸಿ, ರವಿಕುಮಾರ್, ಗಣಪತಿ, ಮಾನ್ಯ ಪಾಟೀಲ್ ರಕ್ಷಿತಾ ಮೊದಲಾದವರು ಉಪಸ್ಥಿತರಿದ್ದರು.
ಜಾನಪದ ಕಲಾ ಉತ್ಸವದಲ್ಲಿ ಸಾಗರ ಮಂಜಪ್ಪ ಮತ್ತು ತಂಡದವರಿಂದ ಡೊಳ್ಳು ಕುಣಿತ, ತರಿಕೆರೆ ಪಲ್ಲವಿ ಮತ್ತು ತಂಡದವರಿಂದ ವೀರಗಾಸೆ, ಗುಡ್ಡಪ್ಪ ಜೋಗಿ ಮತ್ತು ತಂಡದವರಿಂದ ಜೋಗಿ ಪದ, ಅಮೃತೇಶ್ವರಿ ಮತ್ತು ತಂಡ ದಾವಣಗೆರೆ ಇವರಿಂದ ಮಹಿಳಾ ಡೊಳ್ಳು ಕುಣಿತ, ಕಣ್ಣೂರು ಮಾರಿಕಾಂಬ ಭಜನಾ ಮಂಡಳಿಯಿಂದ ಭಜನೆ, ಬಾಗಲಕೋಟೆ ಮಂಜುಳಾ ಮತ್ತು ತಂಡದವರಿಂದ ಲಂಬಾಣಿ ನೃತ್ಯ, ಮಂಡ್ಯದ ಕೆ.ಬಿ.ಸ್ವಾಮಿ ಮತ್ತು ತಂಡದವರಿಂದ ಪೂಜಾ ಕುಣಿತ, ಕಡೂರು ಹೆಚ್.ಎಂ.ರವಿ ತಂಡದವರಿಂದ ನಂದಿ ಧ್ವಜ, ಮೈಸೂರು ಜಗದೀಶ್ ಮತ್ತು ತಂಡದವರಿಂದ ಸೋಮನ ಕುಣಿತ, ಶಿವಪ್ಪ ನಾಯಕ ವಿವಿಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.





