ಆನಂದಪುರ : ಇಲ್ಲಿನ ಇತಿಹಾಸ ಪ್ರಸಿದ್ಧ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥಸಪ್ತಮಿ ಎಂದು ನಡೆಯುವ ರಂಗನಾಥ ಸ್ವಾಮಿ ರಥೋತ್ಸವಕ್ಕೆ ಆನಂದಪುರ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಭಕ್ತರು ಬಂದು ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸುತ್ತಾರೆ.
ಲಕ್ಷ್ಮೀರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ರಥಕ್ಕೆ ಪೂಜೆ ಮಾಡಲಾಗುತ್ತದೆ. ನಡೆದುಕೊಂಡು ಬಂದ ಸಾಂಪ್ರದಾಯದಂತೆ ಬೆಳಂದೂರು ಹಾಗೂ ಮಲವಗೊಪ್ಪ ಕುಟುಂಬದವರು ಮೊದಲ ಪೂಜೆ ಸಲ್ಲಿಸುತ್ತಾರೆ. ರಾಜಸ್ವ ನಿರೀಕ್ಷಕರಾದ ಕವಿರಾಜ್ ಅವರು ಪೂಜೆ ಸಲ್ಲಿಸಿದ ನಂತರ ಸ್ವಾಮಿಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ರಾಜಬೀದಿ ಉತ್ಸವವು ಆನಂದಪುರದ ಪ್ರಮುಖ ಬೀದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಭಕ್ತರು ಮನೆಯ ಮುಂದೆ ರಂಗೋಲಿ ಬಿಡಿಸಿ ದೇವರನ್ನು ಸ್ವಾಗತಿಸಿ ಹಣ್ಣು ಕಾಯಿ ಸಮರ್ಪಿಸಿದರು. ರಥೋತ್ಸವದ ಜೊತೆಗೆ ವಾದ್ಯ ಚೆಂಡೆ ಅಕರ್ಷಣೆಯ ಕೇಂದ್ರ ಬಿಂದು ಆಗಿತ್ತು. ಸ್ವಾಮಿಯ ರಥೋತ್ಸವದ ದಾರಿ ಉದ್ದಕ್ಕೂ ಭಕ್ತರು ಪಾನಕದ ವ್ಯವಸ್ಥೆ ಮಾಡಿದ್ದರು. ನಂತರ ಬಂದಂತಹ ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.





