ಸಾಗರ : ತಾಲ್ಲೂಕಿನ ತ್ಯಾಗರ್ತಿ ಸಮೀಪದ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳು ಓಡಾಡುತ್ತಿರುವುದರಿಂದ ಈ ಭಾಗದ ರೈತರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ
ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆ ಓಡಿಸಲು ಸತತವಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ
ಆನೆಗಳು ಪ್ರತಿ ದಿನ ಒಂದೊಂದು ಗ್ರಾಮದಲ್ಲಿ ಲೂಟಿ ಮಾಡುತ್ತಿವೆ.
ಗುತ್ತನಹಳ್ಳಿ, ಮಸೆಕಲ್ಬೈಲು, ಮುತ್ತಲಬೈಲು, ಹುಲಿಯಪ್ಪನಕಣಿವೆ, ಕುಂದೂರು, ಮಿಡಿನಗರ, ಮಡಿವಾಳಕಟ್ಟೆ ಮೊದಲಾದ ಭಾಗದಲ್ಲಿ ಬಾಳೆ, ಅಡಿಕೆ,ಭತ್ತ, ಶುಂಠಿ ಹಾಗೂ ಜೋಳದ ಬೆಳೆಗೆ ಹಾನಿಯನ್ನುಂಟು ಮಾಡುತ್ತಿವೆ.
ಗುತ್ತನಹಳ್ಳಿಯ ಹಾಲೇಶ್, ಕೆರಿಯಪ್ಪ, ಚತ್ರಪತಿ, ಸತೀಶ, ದ್ಯಾವಪ್ಪ, ರವಿಕುಮಾರ, ಧರ್ಮಪ್ಪ ಅವರ ತೋಟ, ಭತ್ತದ ಗದ್ದೆಗಳು ಆನೆ ದಾಳಿಗೆ ತುತ್ತಾಗಿದೆ. ಪ್ರತಿ ದಿನ ಆತಂಕದಿಂದ ಬದುಕು ಸಾಗಿಸುವ ಪರಿಸ್ಥಿತಿ ಉಂಟಾಗಿದೆ.
ಆನೆ ದಾಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಆನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರು ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಬೇಸತ್ತಿದ್ದಾರೆ. ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಆನೆ ದಾಳಿ ಯಿಂದ ಹಾನಿಯಾದ ತೋಟಗಳಿಗೆ ಭೇಟಿ ನೀಡಿದ ಬರೂರು ಗ್ರಾಮ ಪಂಚಾಯಿತಿ ಸದಸ್ಯ ಶಿವು ಗುತ್ತನಹಳ್ಳಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಆನೆ ದಾಳಿಗೆ ಅನೇಕ ರೈತರು ನಷ್ಟ ಅನುಭವಿಸುತ್ತಿದ್ದಾರೆ . ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಾಗರ ಇಲಾಖೆಯ ಕಛೇರಿ ಎದುರು ಉಗ್ರ ಹೋರಾಟ ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ನೀಡಿದರು.





