ಸಾಗರ : ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನವೆಂಬರ್ ತಿಂಗಳಲ್ಲಿ ನಡೆಯುವುದು ಕ್ರಾಂತಿ ಅಲ್ಲ, ಶಾಂತಿಯುತವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ತೀರ್ಮಾನ ಮಾಡಿ ಸಂಪುಟವನ್ನು ಪುನರ್ ರಚನೆ ಮಾಡುತ್ತಾರೆ.
ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಎಲ್ಲರೂ ಕೂಡ ಆಕಾಂಕ್ಷಿಗಳಾಗಿದ್ದು ನಾನು ಕೂಡ ಆಕಾಂಕ್ಷಿಯಾಗಿದ್ದಾನೆ. ಕೊಡುವುದು ಬಿಡುವುದು ವರಿಷ್ಠರ ತೀರ್ಮಾನವಾಗಿದೆ ಎಂದು ಹೇಳಿದರು.
ಪಂಪ್ಡ್ ಸ್ಟೋರೇಜ್ ಯೋಜನೆ ಬಿಜೆಪಿ ಕಾಲಾವಧಿಯಲ್ಲಿಯೇ ಯೋಜನೆ ರೂಪಿಸಲಾಗಿದೆ. ಬಿಜೆಪಿ ಸಂಸದರು ಇದರ ಬಗ್ಗೆ ತೀರ್ಮಾನ ಮಾಡಬೇಕಾಗಿದೆ. ಅವರೇ ರೂಪಿಸಿದಂತ ಯೋಜನೆಗೆ ವಿರೋಧ ಮಾಡುವುದು ಸರಿಯಲ್ಲ. ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದು ಯೋಜನೆ ನಿಲ್ಲಿಸುವುದಾದರೆ ನಿಲ್ಲಿಸಲಿ ಎಂದು ಹೇಳಿದರು.
ಸಾಗರದಿಂದ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ನೂರಾರು ಎಕರೆ ಅರಣ್ಯ ಜಾಗ ನಾಶವಾಗುತ್ತಿದೆ. ಈ ಯೋಜನೆಯನ್ನು ಯಾರು ಸಹ ವಿರೋಧ ಮಾಡುತ್ತಿಲ್ಲ. ಇದಕ್ಕೆ ರೈತ ಸಂಘ ಪರಿಸರವಾದಿಗಳು ಹೋರಾಟ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯೋಜನೆ ಜಾರಿಗೆ ತರುತ್ತಿರುವುದು ದುಡ್ಡು ಹೊಡಿಯೋ ಉದ್ದೇಶದಿಂದ ಎನ್ನುವ ಮಾಜಿ ಶಾಸಕರು ಹೇಳಿಕೆ ಹಾಸ್ಯಾಸ್ಪದವಾಗಿದೆ. ಹಾಗಾದರೆ ಸಿಗಂದೂರು ಸೇತುವೆ ಮುಂತಾದ ಬಿಜೆಪಿ ತರುವ ಯೋಜನೆಗಳು ದುಡ್ಡು ಹೊಡೆಯುವ ಯೋಜನೆಗಳಾ ಎಂದು ಪ್ರಶ್ನೆ ಮಾಡಿದರು.
ಮೊದಲು ಆರ್ ಎಸ್ ಎಸ್ ಉದ್ದೇಶ ಉತ್ತಮವಾಗಿತ್ತು, ಆದರೆ ಈಗ ರೌಡಿಗಳು ಕಾಮುಕರು ಸೇರಿದ್ದಾರೆ. ಅಲ್ಲದೆ ಚಡ್ಡಿಯ ಬದಲು ಪ್ಯಾಂಟ್ ಹಾಕಿರುವುದರಿಂದ ಅದರ ಮೂಲ ಉದ್ದೇಶ ನಾಶವಾಗಿದೆ ಎಂದು ಕಿಡಿಕಾರಿದರು. ನಮ್ಮ ಉದ್ದೇಶ ಆರ್ ಎಸ್ ಎಸ್ ಬ್ಯಾನ್ ಮಾಡುವುದಲ್ಲ. ರಕ್ಷಣೆಯ ಉದ್ದೇಶದಿಂದ ಅನುಮತಿ ಪಡೆಯಲಿ ಎಂಬುದಾಗಿದೆ ಎಂದು ಹೇಳಿದರು.
ಸಾಗರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ, ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಗಜೇಂದ್ರ, ಬಗರ್ ಹುಕುಂ ಸದಸ್ಯರಾದ ಹೊಳಿಯಪ್ಪ, ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಖಲೀಮುಲ್ಲಾ ಖಾನ್, ರಹಮತ್ ಉಲ್ಲಾ, ಮಂಜುನಾಥ್, ಷಣ್ಮುಖ ಇನ್ನಿತರರು ಉಪಸ್ಥಿತರಿದ್ದರು.





