ಸಾಗರ : ಕಾವ್ಯಗಳಿಂದ ಮಾತ್ರ ಮನುಷ್ಯ ಸಂಬಂಧವನ್ನು ಹೆಚ್ಚಿಸಲು ಸಾಧ್ಯ ಎಂದು ಪತ್ರಕರ್ತ ಜಗನ್ನಾಥ್ ಆರ್ ಹೇಳಿದರು.
ಅವರು ಆನಂದಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ದಸರಾ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಾತುಗಳಲ್ಲಿ ಹೇಳಲಾರದ ವಿಚಾರಗಳನ್ನು ಹೇಳಿಕೊಳ್ಳಲು ಕಾವ್ಯದ ಮೂಲಕ ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು, ಕಲಾವಿದರು ಬರಹಗಾರರು ಇದ್ದಾರೆ ಅವರಿಗೆ ಇಂತಹ ವೇದಿಕೆಗಳಿಂದ ಮಾತ್ರ ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ಕನ್ನಡ ಕಾವ್ಯ ಪರಂಪರೆಗೆ ಪ್ರಾಚೀನ ಇತಿಹಾಸವಿದೆ. ಕಾವ್ಯ ಕಟ್ಟುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು. ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಧ್ಯಯನ ಅತಿ ಅವಶ್ಯಕವಾಗಿದೆ. ಮನೆ ಮನಗಳಲ್ಲಿ ಕಾವ್ಯದ ಚಿಂತನೆಯಿದ್ದಲ್ಲಿ ಮಾತ್ರ ಮಾನವೀಯ ಸಂಬಂಧಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಪ್ರತಿ ಮನೆಗೊಂದು ಗ್ರಂಥಾಲಯವನ್ನು ಹೊಂದಿದಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿ ಉಂಟು ಮಾಡುವ ಕೆಲಸ ಆಗಬೇಕಾಗಿದೆ. ಅಲ್ಲದೆ ಮೌಲ್ಯಗಳನ್ನು ಬಿತ್ತುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಪರಿಷತ್ತು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಪರಿಸರವನ್ನು ಉಂಟುಮಾಡುತ್ತಿದೆ ಎಂದು ಹೇಳಿದರು.
ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಮುಲ್ಲಾ ಖಾನ್ ಮಾತನಾಡಿ, ಇತಿಹಾಸವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ಮೂಲಕ ನಾಡಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ. ನಿರಂತರವಾದ ಅಧ್ಯಯನವನ್ನು ಮಾಡುವಂತಾಗಬೇಕು. ಆನಂದಪುರ ಪ್ರದೇಶಕ್ಕೆ ವಿಶೇಷವಾದ ಇತಿಹಾಸವಿದೆ. ಅದರಲ್ಲೂ ಮಹಂತಿನ ಮಠ ಚಂಪಕ ಸರಸು ಇಂದು ಜನಾಕರ್ಷಣೆಯ ಕೇಂದ್ರ ಆಗುತ್ತಿದೆ ಎಂದು ಹೇಳಿದರು.
ಕಸಾಪ ಆನಂದಪುರ ಹೋಬಳಿ ಘಟಕದ ಅಧ್ಯಕ್ಷ ಬಿ.ಡಿ.ರವಿಕುಮಾರ್ ಮಾತನಾಡಿ, ನಮ್ಮ ಸುತ್ತ ಮುತ್ತ ಅನೇಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಭೆಗಳು ಇದ್ದು, ಅಂತಹವರನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಎಂದು ಹೇಳಿದರು.
ಆನಂದಪುರ ಪಿಎಸ್ಐ ಪ್ರವೀಣ್, ಆನಂದಪುರ ಗ್ರಾಮ ಪಂಚಾಯಿತಿ ಸದಸ್ಯ ಗಜೇಂದ್ರ, ಪ್ರಮುಖರಾದ ರಮಾನಂದ ಸಾಗರ್, ಗಣಪತಿ ಯಡೇಹಳ್ಳಿ, ಮಕ್ಕಳ ಕವಿಗೋಷ್ಠಿ ಅಧ್ಯಕ್ಷೆ ರಚನಾ, ಪತ್ರಕರ್ತ ಅಮಿತ್ ಆರ್.ಮೊದಲಾದವರು ಉಪಸ್ಥಿತರಿದ್ದರು.





