ಸಾಗರ: ಸಾಗರದಿಂದ ಸಿಗಂದೂರಿಗೆ ಹೊರಟ ಟಿಟಿ ವಾಹನ ಪಲ್ಟಿಯಾಗಿ ಚಾಲಕ ಸೇರಿ 13 ಮಂದಿ ಗಾಯಗೊಂಡಿರುವ ಘಟನೆ ಸಾಗರ ತಾಲ್ಲೂಕಿನ ಕೂರನಕೊಪ್ಪ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನಿಂದ ರೈಲಿನ ಮೂಲಕ ಸಾಗರಕ್ಕೆ ಆಗಮಿಸಿದ್ದ 12 ಮಂದಿ ಮಹಿಳೆಯರು ಸಾಗರದಿಂದ ವಾಹನ ಮಾಡಿಕೊಂಡು ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಸಿಗಂದೂರು ರಸ್ತೆಯ ಕೂರನಕೊಪ್ಪ ಸಮೀಪ ಪಲ್ಟಿಯಾಗಿದೆ.
ವಾಹನದಲ್ಲಿದ್ದ 12 ಮಹಿಳೆಯರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು 108 ವಾಹನದ ಮೂಲಕ ಗಾಯಾಳುಗಳನ್ನು ಸಾಗರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ರೇಖಾ, ಗೌರಮ್ಮ, ಗಾಯತ್ರಿ, ದಿವ್ಯ, ದೀಪಾ, ಪ್ರತಿಭಾ, ಸುಮೀತಾ, ಲಲಿತಮ್ಮ, ಮಾಳ್ವಿಕಾ, ಅಶ್ರೀತ ಇವರು ಬೆಂಗಳೂರು ಮೂಲದವರಾಗಿದ್ದಾರೆ. ಚಾಲಕ ಲೋಹಿತ್ ಸಾಗರ ನಿವಾಸಿ ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು:
ಅಪಘಾತದ ಮಾಹಿತಿ ಪಡೆದು ತಮ್ಮ ಕಾರ್ಯಕ್ರಮ ಮೊಟಕುಗೊಳಿಸಿ ಶಾಸಕ ಗೋಪಾಲಕೃಷ್ಣ ಬೇಳೂರು ಆಸ್ಪತ್ರೆಗೆ ದೌಡಾಯಿಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇👇👇👇





