ಸಾಗರ : ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು.
ಅವರು ಸಾಗರ ತಾಲ್ಲೂಕಿನ ಹೊಸೂರು ಸಮೀಪದ ಕೋಣನತಲೆ ಗ್ರಾಮದಲ್ಲಿರುವ ಕಾಲಭೈರವ ದೇವಸ್ಥಾನದ ಮುಂಭಾಗ ಭೈರವ ಸ್ತಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಯಾವುದೇ ಸಮಾಜದ ಅಭಿವೃದ್ಧಿಯಾಗುತ್ತದೆ. ನಿಮ್ಮ ಜಾನಪದ ಕಲೆಯಿಂದ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದೀರಿ. ಆದರೆ ಮಕ್ಕಳಿಗೆ ಜಾನಪದ ಕಲೆಯ ಜೊತೆಗೆ ಉನ್ನತ ವಿದ್ಯಾಭ್ಯಾಸ ನೀಡುವುದರ ಮೂಲಕ ವಿವಿಧ ಹುದ್ದೆಗಳನ್ನು ಅಲಂಕರಿಸುವ ರೀತಿಯಲ್ಲಿ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಮೂಢನಂಬಿಕೆಗಳ ಮೊರೆ ಹೋಗಬೇಡಿ, ದೇವರಲ್ಲಿ ಭಕ್ತಿಯಿಂದ ದೇವರ ಪೂಜೆ ಮಾಡಿ ನಂಬಿಕೆ ಇಟ್ಟರೆ ಪುಣ್ಯ ಲಭಿಸುತ್ತದೆ ಎಂದು ಹೇಳಿದರು.
ಹಿಂದೂ ಧರ್ಮದಲ್ಲಿ ಧಾರ್ಮಿಕ ನಂಬಿಕೆಯಾಗಿ ನೆಲೆ ಊರಿದೆ. ಪ್ರತಿಯೊಬ್ಬರಿಗೂ ದೇವರ ಮೇಲೆ ಅಪಾರ ನಂಬಿಕೆ ಇದೆ. ಪ್ರತಿ ವರ್ಷವೂ ಸಹ 40 ರಿಂದ 50 ದೇವಸ್ಥಾನಗಳಿಗೆ ಅನುದಾನವನ್ನು ನೀಡುತ್ತಾ ಬಂದಿರುವೆ. ಈಗಾಗಲೇ 94 ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವತಿ ವಹಿಸಿದ್ದರು. ಕಾಲಭೈರವ ಜೋಗಿ ಚಾರಿಟೇಬಲ್ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೆ ಗುಡ್ಡಪ್ಪ ಜೋಗಿ, ಹೊಸೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚೌಡಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶರತ್, ಪ್ರಮುಖರಾದ ಲೋಕೇಶ್, ದಿನೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜ ನಾಯ್ಕ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇





