ಸಾಗರ : ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಹಣವನ್ನು ದೋಚಿ ಪರಾರಿಯಾದ ಆರೋಪಿಯನ್ನ ಆನಂದಪುರ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ಹಾಗೂ ಅವರ ನೇತೃತ್ವದ ತಂಡ ಸೆರೆ ಹಿಡಿದಿದೆ.
ಪ್ರಕರಣದ ಹಿನ್ನೆಲೆ
ಆರೋಪಿತರಾದ ಮಂಜು ಹಾಗೂ ಇತರೆ ಐದು ಜನರು ತಮ್ಮ ಬಳಿ ಬಂಗಾರದ ನಾಣ್ಯಗಳಿದ್ದು, ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಹೇಳಿ ಮೈಸೂರು ಮೂಲದ ಜಗದೀಶ್ ಅವರನ್ನು ಜೂನ್ 4 ರಂದು ಸಾಗರ ತಾಲೂಕಿನ ಜೋಗಿನ ಗದ್ದೆ ಗ್ರಾಮಕ್ಕೆ ಕರೆಸಿಕೊಂಡು , ಅವರಿಂದ 9,60,000 ನಗದು ಹಣವನ್ನು ಪಡೆದುಕೊಂಡು ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಪರಾರಿ ಆದ ಬಗ್ಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣವನ್ನು ಬೆನ್ನು ಹತ್ತಿದ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್, ನಿರಂಜನ್, ಜಗದೀಶ್, ನೂತನ್ ಅವರನ್ನು ಒಳಗೊಂಡ ತಂಡ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ, ಆಗಸ್ಟ್ 4 ರಂದು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದ ಮಂಜುನಾಥ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯಿಂದ 71 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಭೇದಿಸಿದ ಪಿಎಸ್ಐ ಪ್ರವೀಣ್ ಹಾಗೂ ಅವರ ತಂಡಕ್ಕೆ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.





