ಆನಂದಪುರ : ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಇತಿಹಾಸ ಪ್ರಸಿದ್ಧ ಕಡ್ಲೆಹಂಕ್ಲು ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮಾರ್ಚ್ 10 ರಿಂದ ಮಾರ್ಚ್ 16ರ ವರೆಗೆ ನಡೆಯಲಿದ್ದು, ಜಾತ್ರೆಯ ಪ್ರಮುಖ ಘಟ್ಟವಾದ ಅಂಕೆ ಹಾಕುವ ಶಾಸ್ತ್ರಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡುವ ಮೂಲಕ ಧಾರ್ಮಿಕ ಕಾರ್ಯಕ್ಕೆ ಮುನ್ನುಡಿ ನೀಡಲಾಯಿತು.
ಜಾತ್ರೆ ಆರಂಭವಾಗುವ ವಾರದ ಮೊದಲು ಅಂಕೆ ಹಾಕುವ ಶಾಸ್ತ್ರವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಗಂಡ ಹಾಗೂ ತವರು ಮನೆಯವರು ಅಸಾದಿ ಜನಾಂಗ, ಚೌಟಗಿ, ಮಾತಂಗಿ ಮಹಾರಾಣಿಯವರು ಈ ಶಾಸ್ತ್ರವನ್ನು ನಡೆಸಿಕೊಡುತ್ತಾರೆ. ಅಂಕೆ ಹಾಕುವ ಶಾಸ್ತ್ರ ನಡೆದ ನಂತರ ಈ ಜಾತ್ರೆಗೆ ಸಂಬಂಧಿಸಿದ ಆನಂದಪುರ ಹಾಗೂ ಸುತ್ತಮುತ್ತಲಿನ ಹಳ್ಳಿಯವರು ಬೇರೆ ಊರಿಗೆ ತೆರಳುವಂತಿಲ್ಲ. ತುರ್ತು ಕೆಲಸಗಳಿಗೆ ಹೋದರು ರಾತ್ರಿ ಊರಿಗೆ ಮರಳಬೇಕು ಎನ್ನುವ ಪದ್ಧತಿ ನಡೆದುಕೊಂಡು ಬಂದಿದೆ.
ಈ ಸಂದರ್ಭದಲ್ಲಿ ಕಂಕಣ ಕಟ್ಟುವ ಶಾಸ್ತ್ರವನ್ನು ಅಸಾದಿ ಜನಾಂಗದವರು ನಡೆಸಿಕೊಡುತ್ತಾರೆ. ಕಂಕಣ ಕಟ್ಟಿಕೊಂಡವರು ಕಂಕಣ ಬದ್ಧವಾಗಿ ಜಾತ್ರೆ ಕೆಲಸ ಕಾರ್ಯಗಳಲ್ಲಿ ನಿರಂತರವಾಗಿ ಕೈಜೋಡಿಸಬೇಕು ಎನ್ನುವ ಪದ್ಧತಿ ಬಹುಕಾಲದಿಂದ ನಡೆದುಕೊಂಡು ಬಂದಿದೆ.





