ಸಾಗರ : ತಾಲೂಕಿನ ಆನಂದಪುರದ ಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರಾ ವಿಷಯದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಅವರಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ಆರೋಪ ಮಾಡಿದ್ದಾರೆ.
ಶಾಸಕರ ನೇತೃತ್ವದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿಯಲ್ಲಿ ಜಾತ್ರಾ ವಿಷಯವಾಗಿ ನಡೆದ ಸಭೆಯಲ್ಲಿ ಎರಡು ಮೂರು ಬಾರಿ ಆಯ್ಕೆಯಾದಂತಹ ಸದಸ್ಯರನ್ನು ಮಾಜಿ ಅಧ್ಯಕ್ಷರುಗಳನ್ನ ಕರೆಯದೆ ಸಭೆ ನಡೆಸಿರುವುದು ಖಂಡನೀಯ. ಯಾವ ಯಾವ ವಾರ್ಡಿನಲ್ಲಿ ಯಾವ ಸಮಸ್ಯೆಗಳೇ ಇದೆ ಎಂಬುದನ್ನು ಆಯಾ ವಾರ್ಡಿನ ಸದಸ್ಯರುಗಳಿಗೆ ತಿಳಿದಿರುತ್ತದೆ. ಅವರನ್ನೇ ನಿರ್ಲಕ್ಷ್ಯ ಮಾಡಿ ಸಭೆ ನಡೆಸಿರುವುದು ಸರಿಯಲ್ಲ ಎಂದು ಹೇಳಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಹಾಗೂ EO ಅವರು ಪಂಚಾಯತಿಯ ಪ್ರಮುಖ ವ್ಯಕ್ತಿಗಳಿಗೆ ತಿಳಿಸದೆ ಸಭೆ ನಡೆಸಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.
ಜಾತ್ರಾ ವಿಷಯದಲ್ಲಿ ರಾಜಕಾರಣ ಮಾಡಬಾರದು
ರಾಜಕಾರಣಕ್ಕಾಗಿ ಜಾತ್ರಾ ವಿಷಯದಲ್ಲಿ ಮಧ್ಯಪ್ರವೇಶ ಮಾಡಬಾರದು. ಶಾಸಕರಾದವರು ಜಾತ್ರೆಗೆ ಸಲಹೆ ಸೂಚನೆಯನ್ನು ಮಾತ್ರ ನೀಡಬೇಕು. ಅಭಿವೃದ್ಧಿಯ ಬಗ್ಗೆ ಗಮನ ಹರಿಸಬೇಕು. ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಇದೇ ರೀತಿಯ ಗೊಂದಲ ಸೃಷ್ಟಿ ಮಾಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಂತರ ಗೊಂದಲ ಸರಿ ಮಾಡಲಾಯಿತು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಹರತಾಳು ಹಾಲಪ್ಪ ಅವರು ಜಾತ್ರಾ ವಿಷಯದಲ್ಲಿ ರಾಜಕಾರಣ ಮಾಡಿರಲಿಲ್ಲ. ಜಾತ್ರಾ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವವರು ಹಾಲಿ ಶಾಸಕರು ಮೊದಲಿಗರು ಎಂದು ಹೇಳಿದರು.
ಅಧಿಕಾರಿಗಳು ಶಾಸಕರ ಕೈ ಗೊಂಬೆಯಾಗಬಾರದು
ಪಂಚಾಯತಿ ಆಡಳಿತ ಅಧಿಕಾರಿಯಾದ ಇಓ ಅವರು ಶಾಸಕರ ಕೈ ಗೊಂಬೆಯಾಗಬಾರದು. ಅಧಿಕಾರಿಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡಿದರೆ ಮೇಲಾಧಿಕಾರಿಗಳು ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕರು ರೈತರ ಪರ ಧ್ವನಿ ಎತ್ತಬೇಕು
ತಾಲೂಕಿನಲ್ಲಿ ಪ್ರತಿ ಗ್ರಾಮದಲ್ಲಿಯೂ ಅರಣ್ಯ ಇಲಾಖೆಯ ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದಾರೆ. ಗೋಮಾಳ ರೆವಿನ್ಯೂ ಸೇರಿದಂತೆ ಇನ್ನಿತರ ಭೂಮಿಯನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳುತ್ತಿದ್ದಾರೆ. ಶಾಸಕರಾದವರು ರೈತರ ಪರವಾಗಿ ಮಾತನಾಡಬೇಕು. ಅರಣ್ಯ ಇಲಾಖೆಯವರು ಅವರ ಕೆಲಸವನ್ನು ಅವರು ಮಾಡಲಿ ಎಂದು ಅರಣ್ಯ ಇಲಾಖೆಯ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
EO ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್
ಜಾತ್ರಾ ವಿಷಯವಾಗಿ ಗ್ರಾಮ ಪಂಚಾಯಿತಿಯ ಅವಧಿ ಮುಗಿಯುವ ಮೊದಲೇ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಹೀಗಿರುವಾಗ ಜಾತ್ರಾ ವಿಷಯವಾಗಿ ಮತ್ತೆ ಸಭೆ ಮಾಡಿದಾಗ ಮಾಜಿ ಅಧ್ಯಕ್ಷರುಗಳನ್ನ ಸದಸ್ಯರುಗಳನ್ನ ಇಓ ಅವರು ನಿರ್ಲಕ್ಷ ಮಾಡಿದ್ದು ಸರಿಯಲ್ಲ. ಜಾತ್ರೆಯನ್ನು ಇಓ ಅವರೊಬ್ಬರಿಂದ ನಡೆಸಲು ಸಾಧ್ಯವೇ? . ಜಾತ್ರೆ ನಡೆಸಲಿಕ್ಕೆ ಜಾತ್ರೆ ಸಮಿತಿ ಸದೃಢವಾಗಿದೆ. ಅನುಭವ ಇಲ್ಲದ ಇಓ ಅವರ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಗುರುರಾಜ್, ನವಿನಾ ರವೀಂದ್ರ ಗೌಡ, ಮಾಜಿ ಸದಸ್ಯರುಗಳಾದ ಚೌಡಪ್ಪ, ಮೋಹನ್ ಕುಮಾರ್, ಶಂಕರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಂಜುನಾಥ್ ಇದ್ದರು.





