ಸಾಗರ : ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಂದಂತಹ ಸಂದರ್ಭದಲ್ಲಿ ಜಾತಿಯ ಕಾಲಂ ನಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಿ ಹಾಗೂ ಉಪಜಾತಿಯ ಕಾಲಂ ನಲ್ಲಿ ಸಮಗಾರ ಅಥವಾ ಮೋಚಿ ಎಂದು ನಮೂದಿಸಬೇಕು ಎಂದು ಸಮಗಾರ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ್. ಡಿ ಕರೆ ನೀಡಿದರು.
ಆನಂದಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮೀಕ್ಷೆಯಲ್ಲಿ ಮೋಚಿ ಅಥವಾ ಸಮಗಾರ ಎಂದು ನಮೂದಿಸುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಉತ್ತಮ ಅವಕಾಶಗಳು ಸಿಗುತ್ತವೆ. ಇದು ಸರ್ಕಾರದಿಂದ ಸಿಗುವ ಉತ್ತಮ ಅವಕಾಶವಾಗಿದ್ದು, ಸಮಾಜದ ಪ್ರತಿಯೊಬ್ಬರು ಸಮೀಕ್ಷೆಯಲ್ಲಿ ಸರಿಯಾಗಿ ಜಾತಿಯನ್ನು ನಮೂದಿಸುವಂತೆ ತಿಳಿಸಿದರು.
ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಎಸ್ಸಿ, ಕ್ರಿಶ್ಚಿಯನ್ ಲಿಂಗಾಯಿತ, ಕ್ರಿಶ್ಚಿಯನ್ ಒಕ್ಕಲಿಗ ಎಂದು ನಮೂದಿಸಬಾರದು. ಒಂದು ವ್ಯವಸ್ಥೆಯಿಂದ ಮತಾಂತರವಾಗಿ, ಮತಾಂತರವಾದ ವ್ಯವಸ್ಥೆಯ ಸೌಲಭ್ಯವನ್ನು ಪಡೆಯಬೇಕೆ ವಿನಃ ಮೂಲ ವ್ಯವಸ್ಥೆಯ ಸೌಲಭ್ಯವನ್ನು ಪಡೆಯುವಂತಾಗಬಾರದು ಎಂದು ಹೇಳಿದರು.
ಜೊತೆಗೆ ಮತಾಂತರ ಆದವರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕು. ಎರಡು ಕಡೆ ಸೌಲಭ್ಯವನ್ನು ಪಡೆಯಲು ಅವಕಾಶ ಕೊಡಬಾರದು. ಈ ಹಿನ್ನೆಲೆಯಲ್ಲಿ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸಮಗಾರ ಸಮಾಜದ ರಾಜ್ಯ ಉಪಾಧ್ಯಕ್ಷ ವಕೀಲರಾದ ವಾಸು ಮಾತನಾಡಿ, ಉಪಜಾತಿ ಕಾಲಂ ನಲ್ಲಿ ಮೋಚಿ ಅಥವಾ ಸಮಗಾರ ಎಂದು ನಮೂದಿಸುವ ಮೂಲಕ ನಮ್ಮ ಸಮಾಜ ಜನಸಂಖ್ಯೆ ಎಷ್ಟಿದೆ ಎಂಬುದನ್ನು ಸರ್ಕಾರಕ್ಕೆ ತೋರಿಸಬೇಕಾಗಿರುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಸಮಗಾರ ಸಮಾಜದ ಮುಖಂಡರಾದ ಗುಡುವಿ ಸ್ವಾಮಿ ಮಾತನಾಡಿ, ಸಮಾಜದಲ್ಲಿ ಸಮಗಾರ ಸಮಾಜ ಅತ್ಯಂತ ಶೋಷಿತ ವರ್ಗವಾಗಿದ್ದು, ಒಳ ಮೀಸಲಾತಿ ಜಾರಿಯಿಂದಾಗಿ ರಾಜ್ಯದ ಜನಸಂಖ್ಯೆಯಲ್ಲಿ ಸಮಗಾರ ಸಮಾಜದ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲು ನಾವೇ ಕಾರಣಿಭೂತರಾಗಿದ್ದೇವೆ. ಆದ್ದರಿಂದ ಸಮೀಕ್ಷೆಯಲ್ಲಿ ಸರಿಯಾಗಿ ನಮೂದಿಸುವ ಮೂಲಕ ನಮ್ಮ ಜನಸಂಖ್ಯೆಯನ್ನು ಸರ್ಕಾರಕ್ಕೆ ತಿಳಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರೂಪ ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಯಶೋಧ, ಗೀತಾ ರವಿ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇👇👇👇





