ಶಿವಮೊಗ್ಗ : ರಾಜ್ಯದ ಪ್ರಮುಖ ಮೃಗಾಲಯವಾದ ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ಹೊಸ ಪ್ರಾಣಿಗಳ ಆಗಮನದಿಂದ ಸಂತಸ ಮನೆ ಮಾಡಿದೆ. ಇಲ್ಲಿಗೆ ಔರಂಗಾಬಾದ್ ಮತ್ತು ಇಂದೋರ್ ನಿಂದ ಹುಲಿ ಮತ್ತು ಸಿಂಹಗಳ ಆಗಮನವಾಗಿದೆ. ಇದರಿಂದಾಗಿ ಮೃಗಾಲಯದಲ್ಲಿ ಪ್ರಾಣಿಗಳ ಓಡಾಟದಿಂದ ಇನ್ನಷ್ಟು ಮೆರುಗು ಬಂದಿದೆ.
ಈ ವಿಷಯವಾಗಿ ಮಾಹಿತಿ ನೀಡಿದ ಹುಲಿ ಮತ್ತು ಸಿಂಹಧಾಮದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮರಾಕ್ಷರ ಅವರು ನಮ್ಮ ಹುಲಿ ಮತ್ತು ಸಿಂಹಧಾಮಕ್ಕೆ ಪ್ರಾಣಿ ವಿನಿಮಯದಲ್ಲಿ ಒಟ್ಟು 6 ದೊಡ್ಡ ಪ್ರಾಣಿಗಳು ಬಂದಿವೆ. ಇಂಧೋರ್ ಮತ್ತು ಔರಂಗಾಬಾದ್ ಮೃಗಾಲಯದಿಂದ ತೀರಿಸಿಕೊಳ್ಳಲಾಗಿದೆ . ಇದರಲ್ಲಿ ಒಂದು ಬಿಳಿ ಹುಲಿ ಇದೆ. ಇದು ಸದ್ಯಕ್ಕೆ ನಮ್ಮ ಹುಲಿ ಮತ್ತು ಸಿಂಹಧಾಮದ ಆಕರ್ಷಣೆಯಾಗಿದೆ. ಔರಂಗಾಬಾದ್ ಮೃಗಾಲಯದಿಂದ ಎರಡು ವರ್ಷದ ವಿಕ್ರಮ್ ಎಂಬ ಬಿಳಿ ಹುಲಿ ಬಂದಿದೆ. ಎರಡು ರಾಯಲ್ ಬೆಂಗಾಲ್ 2-4 ವರ್ಷದ ರೋಹಿಣಿ ಮತ್ತು ಶ್ರಾವಣಿ ಎಂಬ ಎರಡು ಹೆಣ್ಣು ಹುಲಿಗಳು ಬಂದಿವೆ. ಇಂಧೋರ್ ಮೃಗಾಲಯದಿಂದ ಎರಡು ವರ್ಷದ ಶಿವ ಮತ್ತು ಸಹಾರ ಎಂಬ ಎರಡು ಸಿಂಹಗಳು ಬಂದಿವೆ. ಜೊತೆಗೆ ರಾಯಲ್ ಬೆಂಗಾಲ್ ಹುಲಿ ಭದ್ರಾ ಬಂದಿದೆ ಎಂದು ಮಾಹಿತಿ ನೀಡಿದರು.
ಮೃಗಾಲಯಕ್ಕೆ ಬಂದಿರುವ ಹುಲಿ ಮತ್ತು ಸಿಂಹಗಳು ಕಿರಿಯ ಪ್ರಾಯದ್ದಾಗಿವೆ. ಹಿಂದೆ ಇದ್ದ ಹುಲಿ ಮತ್ತು ಸಿಂಹಗಳಿಗೆ ವಯಸ್ಸಾಗಿತ್ತು. ಈಗ ಬಂದಿರುವ ಯೌವನದ ಪ್ರಾಣಿಗಳಿಂದ ಇಲ್ಲಿ ಸಂತನೋತ್ಪತ್ತಿಗೆ ಸಹಾಯಕವಾಗಲಿದೆ. ಅದರಂತೆ ಇಂಧೋರ್ ಮೃಗಾಲಯಕ್ಕೆ ನಾಲ್ಕು ಕಾಡೆಮ್ಮೆ ಹಾಗೂ ನಾಲ್ಕು ಆಸ್ಟ್ರೀಚ್ ಕಳುಹಿಸಲಾಗಿದೆ. ಅದೇ ರೀತಿ ಔರಂಗಾಬಾದ್ ಮೃಗಾಲಯಕ್ಕೆ ಎರಡು ಕರಡಿ, ನರಿ ಹಾಗೂ ಸಿಂಹವನ್ನು ನೀಡಲಾಗಿದೆ. ಹೊಸ ಪ್ರಾಣಿಗಳ ಆಗಮನದಿಂದ ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮಾಹಿತಿ ನೀಡಿದರು.





