ಸಾಗರ -ಆತ್ಮವಿಶ್ವಾಸದಿಂದ ಗೆಲುವು ಸಾಧಿಸಲು ಸಾಧ್ಯ ಎಂದು ಬಿಇಓ ಸದಾನಂದ ಸ್ವಾಮಿ. ಸಿ ಹೇಳಿದರು.
ಅವರು ತಾಲ್ಲೂಕಿನ ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಗೆಲುವಿನ ಹೆಜ್ಜೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸತತ ಪರಿಶ್ರಮ ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯನ್ನು ಮೂಡಿಸಿಕೊಳ್ಳಬೇಕು. ಇವರಿಗೆ ಪೂರಕವಾದ ಕಲಿಕಾ ವಿಧಾನಗಳನ್ನು ಶಿಕ್ಷಕರು ಹಾಗೂ ಪೋಷಕರು ನಿರಂತರವಾಗಿ ಕಣ್ಗಾವಲಾಗಿ ಮಾರ್ಗದರ್ಶನವನ್ನು ನೀಡಬೇಕು. ಸಾಧನೆಗೆ ಬೇಕಾಗಿರುವುದು ನಿರಂತರ ಪರಿಶ್ರಮವಾಗಿದೆ ಹಾಗೂ ತನ್ನನ್ನು ತಾನು ತೊಡಗಿಸಿಕೊಂಡು ಮುಂದೆ ಬರುವ ಕೆಲಸ ಆಗಬೇಕಾಗಿದೆ . ಬದುಕಿನಲ್ಲಿ ಅಸಾಧ್ಯ ಎನ್ನುವ ಪದ ಎಂದಿಗೂ ಇರಬಾರದು. ಆ ನಿಟ್ಟಿನಲ್ಲಿ ಕಲಿಕೆಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಸಾಧನೆಯ ಗುರಿಯನ್ನು ತಲುಪಿಸುವ ಹೆಜ್ಜೆಗಳನ್ನು ಹಾಕುವ ಜವಾಬ್ದಾರಿ ನಿಮ್ಮ ಮೇಲಿದೆ.
ಸಾಗರ ತಾಲೂಕಿನಲ್ಲಿ ಈ ವರ್ಷ ಸುಮಾರು 650 ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಗೆಲುವಿನ ಹೆಜ್ಜೆಯ ಮೂಲಕ ತರಬೇತಿ ಕಾರ್ಯಗಾರವನ್ನು ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಭೂಮೇಶ್ ಮಾತನಾಡಿ, ಸಾಧನೆ ಎನ್ನುವುದು ತನ್ನೊಳಗೆ ಇರುವ ಮುಖ್ಯವಾದ ಅಂಶವಾಗಿದೆ. ಅದನ್ನು ಹೊರಗೆ ಹಾಕುವ ಕೆಲಸ ಇಂತಹ ಶಿಬಿರಗಳ ಮೂಲಕ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇಂತಹ ಅನುಕೂಲತೆಗಳನ್ನು ಬಳಸಿಕೊಳ್ಳುವ ಮೂಲಕ ತನ್ನ ಗುರಿಯನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.
ಬಿ ಆರ್ ಸಿ ಯ ಸಮನ್ವಯಾಧಿಕಾರಿ ಡಾ. ಅನ್ನಪೂರ್ಣ ಮಾತನಾಡಿ, ಜೀವನದ ಸಾಧನೆಗಳನ್ನು ನಾವು ಶಿಕ್ಷಣದ ಮೂಲಕ ಗುರಿ ಮುಟ್ಟುವ ಕೆಲಸ ಆಗಬೇಕಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಮೂಲಕ ಕೀರ್ತಿ ತರುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಚಾರ್ಯ ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ, ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಡಾ. ಶಂಕರ್ ಶಾಸ್ತ್ರಿ, ಶಿಕ್ಷಣ ಸಂಯೋಜಕರಾದ ಪಾಲಾಕ್ಷಪ್ಪ ಹಾಗೂ ಕುಮಾರಸ್ವಾಮಿ, ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.





