ಸಾಗರ : ದಲಿತರು ನೀಡಿರುವ ದೂರನ್ನು ದಾಖಲಿಸಿಕೊಳ್ಳದೆ, ಕೇವಲ ವಕೀಲರು ನೀಡಿದ ದೂರನ್ನು ದಾಖಲಿಸಿಕೊಂಡು ದಲಿತರಿಗೆ ಅವಮಾನ ಮಾಡಿದ ಆನಂದಪುರದ ಪಿಎಸ್ಐ ಹಾಗೂ ಎಚ್. ಎಸ್. ಓ ಅವರನ್ನು ಅಮಾನತುಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ನಟರಾಜ್ ಗೇರುಬೀಸ್ ಒತ್ತಾಯಿಸಿದರು.
ಅವರು ಆನಂದಪುರದಲ್ಲಿ ಪೊಲೀಸರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ದಲಿತರ ಮೇಲೆ ದಾಖಲಿಸಿರುವ ಸುಳ್ಳು ದೂರನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ರದ್ದುಪಡಿಸಬೇಕು. ಶರತ್ ಮತ್ತು ಸಂಗಡಿಗರನ್ನು ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದರು.
ದಲಿತರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆದಿದ್ದರೂ ಸಹ ಎಫ್ಐಆರ್ ದಾಖಲಿಸಿಕೊಳ್ಳದೆ ಮಾನ್ಯ ಎಸ್.ಪಿ ಹಾಗೂ ಡಿ.ವೈ ಎಸ್. ಪಿ ಕಡೆಗೆ ಬೊಟ್ಟು ಮಾಡಿ ತೋರಿಸಿ, ಹಾರಿಕೆ ಉತ್ತರ ನೀಡಿರುವುದು ಸರಿಯಲ್ಲ. ಈ ವಿಚಾರವಾಗಿ ದಲಿತ ಸಂಘಟನೆ ಪ್ರತಿಭಟನೆ ಮಾಡುತ್ತವೆ ಎಂದು ವಿಷಯ ತಿಳಿದ ನಂತರ ಎಫ್ ಐ ಆರ್ ದಾಖಲಿಸಿಕೊಳ್ಳುವುದು ಸರಿಯೇ ಎಂದು ಪ್ರಶ್ನೆ ಮಾಡಿದರು. ಆದ್ದರಿಂದ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಶರತ್ ಚಂದಳ್ಳಿ ಎಂಬ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸುವಂತೆ ಮತ್ತು ಶಿವರಾಮ ಹಾಗೂ ಸಂಗಡಿಗ ಮೇಲೆ ಹಾಕಿರುವ ಸುಳ್ಳು ಕೇಸನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಘಟನೆಯ ವಿವರ
ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಶರತ್ ಕುಮಾರ್ ಅವರು 112 ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಹಲ್ಲೆ ಮಾಡಿದರೆಂದು ಕೆಲವರ ಮೇಲೆ ದೂರು ದಾಖಲು ಮಾಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಐದು ಜನರನ್ನ ಬಂಧನ ಮಾಡಲಾಗಿತ್ತು.
ಇದಕ್ಕೆ ಪ್ರತಿಯಾಗಿ ಅದೇ ದಿನ ಕಿಡ್ನಾಪ್ ಕೊಲೆ ಪ್ರಯತ್ನ ಹಾಗೂ ಜಾತಿ ನಿಂದನೆ ಸಂಬಂಧಪಟ್ಟಂತೆ ದೂರು ನೀಡಿದರೂ ಸಹ ದೂರನ್ನು ದಾಖಲಿಸಿಕೊಳ್ಳದೆ ದಿನದಲಿತರಿಗೆ ಪಿಎಸ್ಐ ಪ್ರವೀಣ್ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವುದು ದಲಿತ ಸಂಘಟನೆ ಆರೋಪವಾಗಿದೆ.
ಈ ಹಿನ್ನೆಲೆಯಲ್ಲಿ ದಲಿತ ಸಂಘಟನೆ ಆನಂದಪುರದಿಂದ ಪೊಲೀಸ್ ಠಾಣೆಯವರಿಗೆ ಧರಣಿ ಸತ್ಯಾಗ್ರಹದ ಮೂಲಕ ಹೋಗಿ ಸಾಗರ ವೃತ್ತ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಅವರಿಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದುರ್ಗಾ ಭೋವಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ವಕೀಲನ ಮಾತು ಕೇಳಿ, ಅವರ ಪರವಾಗಿ ನಿಂತು ದಲಿತ ಮಕ್ಕಳನ್ನ ಹೀನವಾಗಿ ಜೈಲಿಗೆ ಕಳಿಸುವಂತಹ ಕೃತ್ಯವನ್ನು ನಮ್ಮ ದಲಿತ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಆನಂದಪುರದಿಂದ ಶಿವಮೊಗ್ಗ ಎಸ್.ಪಿ ಕಚೇರಿ ಅವರಿಗೆ ಪಾದಯಾತ್ರೆ ಮಾಡಿ ಧರಣಿ ಸತ್ಯಾಗ್ರಹ ಮಾಡಲಾಗುವುದೆಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗಣಪತಿ ಇರುವಕ್ಕಿ, ಉಮೇಶ್, ಶೇಖರ್, ಮಂಜಣ್ಣ, ಹರೀಶ್, ಪೃಥ್ವಿ, ಗಂಗಾಧರ, ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.





