ಸಾಗರ : ಈ ಬಾರಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ರೈತರ ಕೈ ಸೇರಬೇಕಾದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.
ತಾಲ್ಲೂಕಿನ ಚನ್ನಶೆಟ್ಟಿಕೊಪ್ಪ ಗ್ರಾಮದ ಗಾಮಪ್ಪ ಅವರು ತಮ್ಮ ಜಮೀನಿನಲ್ಲಿ ಅಡಿಕೆ, ಕಬ್ಬು, ಶುಂಠಿ, ಭತ್ತ, ಅಡಿಕೆ ಬೆಳೆಯನ್ನು ಬೆಳೆದಿದ್ದು, ಈ ವರ್ಷ ಸುರಿದ ಬಾರಿ ಮಳೆಯಿಂದ ಅಡಿಕೆಗೆ ಕೊಳೆ ರೋಗ ಹಾಗೂ ಶುಂಠಿಗೆ ಎಲೆಚುಕ್ಕಿ ರೋಗ ಬಂದ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿದೆ. ಇದರಿಂದ ಮನನೊಂದ ರೈತ ಗಾಮಪ್ಪ ಅವರು ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಮಾಡಿದ ಸಾಲವನ್ನು ತೀರಿಸುವುದು ಅಸಾಧ್ಯವೆಂದು ಮನಗಂಡು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ಪತ್ತಿನ ಸಹಕಾರ ಸಂಘ, ಬೈಕ್ ಸಾಲ, ಸಾಗರ ಅಡಿಕೆ ಮಂಡಿಯಲ್ಲಿ ಸಾಲ, ಗ್ರಾಮಸ್ಥರು ಹಾಗೂ ಸಂಬಂಧಿಕರಿಂದ ಸೇರಿದಂತೆ ಒಟ್ಟು 4.5 ಲಕ್ಷಕ್ಕೂ ಅಧಿಕ ಸಾಲ ಮಾಡಿದ ಹಿನ್ನೆಲೆಯಲ್ಲಿ, ಸಾಲ ತೀರಿಸುವುದು ಅಸಾಧ್ಯವೆಂದುಕೊಂಡ ಅವರು ಅ.10 ರಂದು ಬೆಳೆಗೆ ಸಿಂಪಡಿಸಲು ತಂದ ಕೀಟನಾಶಕ ಔಷಧಿಯನ್ನು ಅಡಿಕೆ ತೋಟದಲ್ಲಿ ಸೇವನೆ ಮಾಡಿದ್ದಾರೆ. ಸೇವನೆ ಮಾಡಿ ಆಸ್ವಸ್ಥರಾಗಿ ಕೂಗಾಡುತ್ತಿರುವುದನ್ನು ಗಮನಿಸಿದ ಅವರ ಮಗ ಮತ್ತು ದೂರುದಾರರ ತಾಯಿ ತಕ್ಷಣ ಅವರನ್ನು ಸಮೀಪದ ಆನಂದಪುರದ ಆಸ್ಪತ್ರೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನದ ಚಿಕಿತ್ಸೆಗೆ ಪಲಕಾರಿಯಾಗದೆ ಅಕ್ಟೋಬರ್ 11ರಂದು ಮೃತಪಟ್ಟಿದ್ದಾರೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





